ಹುಣಸೂರು: ರಾಜ್ಯದಲ್ಲಿ ತಂಬಾಕು ಹರಾಜು ಮಾರುಕಟ್ಟೆ ಅ.8ರಂದು ಆರಂಭವಾಗಲಿದೆ. ಈ ಸಾಲಿನಲ್ಲಿ ತಂಬಾಕು ಬೆಳೆಗಾರರು ಸರಾಸರಿ ಪ್ರತಿ ಕೆ.ಜಿಗೆ ₹ 380 ದರ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ತಂಬಾಕು ಮಂಡಳಿ, ತಂಬಾಕು ಖರೀದಿದಾರರು ಮತ್ತು ರೈತರ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ತಂಬಾಕು ಹರಾಜು ಮಾರುಕಟ್ಟೆ ಆರಂಭಿಸುವ ಮುನ್ನ ರೈತ, ವ್ಯಾಪಾರಿ ಮತ್ತು ಮಂಡಳಿ ಜಂಟಿ ಸಭೆ ನಡೆಸಬೇಕೆಂಬ ಬೇಡಿಕೆ ನಾಲ್ಕು ವರ್ಷಗಳ ಬಳಿಕ ಮಂಡಳಿ ಈಡೇರಿಸಿದೆ. ರೈತರಿಗೆ ಅನುಕೂಲವಾಗಿದೆ ಎಂದರು.
ಈ ಸಾಲಿನಲ್ಲಿ ವಾತಾವರಣ ಏರುಪೇರಿನಿಂದಾಗಿ ಉಂಟಾದ ಪ್ರಾಕೃತಿಕ ವಿಕೋಪದಲ್ಲೂ ತಂಬಾಕು ಬೆಳೆಗಾರ ತಂಬಾಕು ಬೇಸಾಯ ಮಾಡಿದ್ದಾರೆ. ಮಂಡಳಿ ಈ ಸಾಲಿನಲ್ಲಿ ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಸರಾಸರಿ ದರ ಸಿಗುವ ರೀತಿ ಮಾರುಕಟ್ಟೆ ನಡೆಸಬೇಕು ಎಂದು ಮನವಿ ಮಾಡಿದರು.
ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಉತ್ತಮ ದರ್ಜೆ ತಂಬಾಕಿಗೆ ₹ 415 ರಿಂದ ₹420 ತನಕ ಮಾರಾಟವಾಗಿದೆ. ರಾಜ್ಯದ ತಂಬಾಕು ಎಲ್ಲಾ ರೀತಿಯಲ್ಲಿ ಉತ್ತಮವಿದ್ದು ನಮ್ಮ ರೈತರಿಗೂ ಇದೇ ಪ್ರಮಾಣದಲ್ಲಿ ದರ ಸಿಗುವಂತೆ ಮಾರುಕಟ್ಟೆ ನಿಯಂತ್ರಿಸಬೇಕು ಎಂದರು.
ತಂಬಾಕು ಬೆಳೆಗಾರರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಪ್ರತಿ ಕೆ.ಜಿ ತಂಬಾಕು ಉತ್ಪಾದನೆಗೆ ₹275 ರಿಂದ ₹280 ತಗಲುತ್ತಿದ್ದು, ಮಾರುಕಟ್ಟೆಯಲ್ಲಿ ಸರಾಸರಿ ₹ 380 ಸಿಗುವುದರಿಂದ ರೈತ ಬದುಕುಳಿಯಬಹುದು. ಇಲ್ಲವಾದಲ್ಲಿ ತಂಬಾಕು ಬೆಳೆಗಾರ ಪರ್ಯಾಯ ಬೆಳೆಗೆ ಹೋಗಬೇಕಾಗುತ್ತದೆ ಎಂದರು.
ಉತ್ತಮ ದರ ಸಿಕ್ಕಲ್ಲಿ ಬೆಳೆಗಾರರು ಈ ಬೇಸಾಯದಲ್ಲಿ ಉಳಿಯಬಹುದು ಇಲ್ಲವಾದಲ್ಲಿ ಉತ್ಪಾದನೆ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ ಎಂದೂ ಹೇಳಿದರು.
ಹರಾಜು ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ರಾಜ್ಯಕ್ಕೆ ಈ ಸಾಲಿಗೆ 10 ಕೋಟಿ ಕೆ.ಜಿ ತಂಬಾಕು ಉತ್ಪತ್ತಿಗೆ ಅವಕಾಶವನ್ನು ವಾಣಿಜ್ಯ ಸಚಿವಾಲಯ ಅವಕಾಶ ನೀಡಿದ್ದು, ಆದರೆ ಪ್ರಾಕೃತಿಕ ವಿಕೋಪದಿಂದಾಗಿ ನಿರೀಕ್ಷೆಯಷ್ಟು ಇಳುವರಿ ಇಲ್ಲವಾಗಿದೆ. ರೈತ ಮತ್ತು ವ್ಯಾಪಾರಿ ಕಂಪನಿಯೊಂದಿಗೆ ಮಾರುಕಟ್ಟೆ ಆರಂಭಿಸುವ ಮುನ್ನವೇ ಸಭೆ ನಡೆಸಿದ್ದು, ಇದರ ಪ್ರಯೋಜನ ರೈತರಿಗೆ ಸಿಗುವ ವಿಶ್ವಾಸವಿದೆ ಎಂದರು.
ಹರಾಜು ಮಾರುಕಟ್ಟೆಯಲ್ಲಿ ಹಲವು ಸಮಸ್ಯೆ ಇದ್ದು, ಅವುಗಳನ್ನು ಪರಿಹರಿಸುವ ಬಗ್ಗೆ ಈಗಾಗಲೇ ಸಂಬಂಧಿಸಿದವರಿಗೆ ಪಟ್ಟಿ ನೀಡಿದ್ದೇವೆ. ಅತಿ ಶೀಘ್ರದಲ್ಲೇ ಎಲ್ಲವೂ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಪ್ರಗತಿಪರ ರೈತ ಕಾಳೇಗೌಡ, ಐಟಿಸಿ ಲೀಫ್ ಮ್ಯಾನೇಜರ್ ರವೀಶ್, ಮಂಡಳಿ ನಾಮನಿರ್ದೇಶಕ ವಿಕ್ರಂ ಗೌಡ, ಸಿಟಿ.ಆರ್.ಐ ವಿಜ್ಞಾನಿ ಡಾ.ರಾಮಕೃಷ್ಣನ್ ಮಾತನಾಡಿದರು.
ಸಭೆಯಲ್ಲಿ ಹರಾಜು ಮಾರುಕಟ್ಟೆ ಅಧಿಕಾರಿ ಮಾರಣ್ಣ, ಗೋಪಾಲ್, ಶಾಮ್ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ 2೦೦ ತಂಬಾಕು ಬೆಳೆಗಾರರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.