ಮೈಸೂರು: ಇಲ್ಲಿನ ದೇವರಾಜ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ 2 ಕೆ.ಜಿ ತಿಮಿಂಗಿಲ ವಾಂತಿ (ಅಬೆರ್ಗ್ರಿಸ್) ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
’ಇಲ್ಲಿನ ವಿನೋಬಾ ರಸ್ತೆಯ ಚಹಾದಂಗಡಿವೊಂದರಲ್ಲಿ ನಾಲ್ವರು ತಿಮಿಂಗಲ ವಾಂತಿ ಕುರಿತು ಮಾತನಾಡಿಕೊಳ್ಳುತ್ತಿರುವುದಾಗಿ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಆಧರಿಸಿ ದಾಳಿ ನಡೆಸಿ ರಾಜೀವ್ನಗರದ ಸಮೀಉಲ್ಲಾ (44) ಹಾಗೂ ಶ್ರೀರಂಗಪಟ್ಟಣದ ರಾಘವೇಂದ್ರ (40) ಅವರನ್ನು ಬಂಧಿಸಲಾಯಿತು. ಉಳಿದ ಇಬ್ಬರು ಪರಾರಿಯಾದರು’ ಎಂದು ಪೊಲೀಸರು ತಿಳಿಸಿದ್ದಾರೆ. ದೇವರಾಜ ಠಾಣೆಯ ಇನ್ಸ್ಪೆಕ್ಟರ್ ಆರ್.ದಿವಾಕರ್ ನೇತೃತ್ವ ವಹಿಸಿದ್ದರು.
ಆಗಸ್ಟ್ 7ರಂದು ಅರಣ್ಯ ಸಂಚಾರ ದಳದ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪ ಬಂಧಿಸಿ, ಅವರಿಂದ ಸುಮಾರು ₹ 16 ಕೋಟಿ ಮೌಲ್ಯದ 8.2 ಕೆ.ಜಿ ತಿಮಿಂಗಲ ವಾಂತಿಯನ್ನು ವಶಪಡಿಸಿಕೊಂಡಿದ್ದರು.
‘ಸುದೀರ್ಘ ಕಾಲದವರೆಗೆ ಜೀರ್ಣವಾಗದ ವಸ್ತುಗಳನ್ನು ತಿಮಿಂಗಲ ವಾಂತಿ ಮಾಡಿದಾಗ ಅದು ಮೇಣದ ರೂಪದಲ್ಲಿ ಸಮುದ್ರದಲ್ಲಿ ತೇಲುತ್ತದೆ. ಸುಗಂಧದ್ರವ್ಯ ಹಾಗೂ ಔಷಧ ತಯಾರಿಕಾ ಕ್ಷೇತ್ರದಲ್ಲಿ ಅದನ್ನು ಹೆಚ್ಚು ಬಳಸಲಾಗುತ್ತದೆ. ವಿಶೇಷವಾಗಿ ಕತಾರ್, ದುಬೈ ಹಾಗೂ ಚೀನಾದಲ್ಲಿ ಬಹು ಬೇಡಿಕೆ ಇದೆ. ಕಾಳಸಂತೆಯಲ್ಲಿ ಪ್ರತಿ ಕೆ.ಜಿಗೆ ₹ 3 ಕೋಟಿಯವರೆಗೂ ದರವಿದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.