ADVERTISEMENT

ಏ.9ರಿಂದ ಮೈಸೂರು ಅರಮನೆಯಲ್ಲಿ ‘ಯುಗಾದಿ ಸಂಗೀತೋತ್ಸವ’

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 15:06 IST
Last Updated 6 ಏಪ್ರಿಲ್ 2024, 15:06 IST
ಮೈಸೂರು ಅರಮನೆ
ಮೈಸೂರು ಅರಮನೆ   

ಮೈಸೂರು: ಯುಗಾದಿ ಅಂಗವಾಗಿ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಅರಮನೆ ಮಂಡಳಿಯಿಂದ ಏ.9ರಿಂದ 11ರವರೆಗೆ ‘ಯುಗಾದಿ ಸಂಗೀತೋತ್ಸವ’ ಆಯೋಜಿಸಲಾಗಿದೆ.

ಏ.9ರಂದು ಸಂಜೆ 5ರಿಂದ 6ರವರೆಗೆ ಗುರುರಾಜ್‌ ತಂಡದಿಂದ ಸ್ಯಾಕ್ಸೊಫೋನ್ ವಾದನ, ಸಂಜೆ 6ರಿಂದ 6.30ರವರೆಗೆ ಶ್ರೀಧರ ಮೂರ್ತಿ ಅವರಿಂದ ‘ಪಂಚಾಂಗ ಶ್ರವಣ’ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ರಿಂದ ನಾಡಗೀತೆ ಮತ್ತು ಮೈಸೂರು ಸಂಸ್ಥಾನದ ನಾಡಗೀತೆಯಾದ ‘ಕಾಯೌಶ್ರೀಗೌರಿ ಕರುಣಾಲಹರಿ’ ಗೀತೆಯ ಮೂಲಕ ಉದ್ಘಾಟನೆಗೊಳ್ಳಲಿದೆ. 6.45ರಿಂದ ಬದರಿ ದಿವ್ಯಭೂಷಣ್ ಮತ್ತು ತಂಡದವರು ನೃತ್ಯ ವೈಭವ ಪ್ರಸ್ತುತಪಡಿಸುವರು. ಸಂಜೆ 7.45ರಿಂದ ಅನನ್ಯ ಭಟ್ ಹಾಗೂ ತಂಡದವರು ‘ಯುಗಾದಿ ಸಂಗೀತೋತ್ಸವ’ ಕಾರ್ಯಕ್ರಮ ನೀಡುವರು.

ಏ.10ರಂದು ಸಂಜೆ 5.30ರಿಂದ ನಾಗೇಶ್ ಕಂದೇಗಾಲ ತಂಡದಿಂದ ‘ಭಾವ ಗೀತೋತ್ಸವ’, ಸುಮುಖ್ ಸೂರ್ಯ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಅಮಿತ್ ರಾಜ್‌ ತಂಡದವರು ‘ಲಯ ಅನುಭವ’ ಕಾರ್ಯಕ್ರಮ ಪ್ರಸ್ತುತಪಡಿಸುವರು.

ADVERTISEMENT

ಏ.11ರಂದು ಸಂಜೆ 5.30ರಿಂದ ಚಲನಚಿತ್ರ ಸಂಗೀತ ನಿರ್ದೇಶಕ ಡಿ.ರಾಮಕೃಷ್ಣ ಅವರ ತಂಡದಿಂದ ಭಕ್ತಿ ಭಾವಗೀತೆಗಳ ‘ಗಾನ ಲಹರಿ’, ಸಿ.ಎ. ಶ್ರೀಧರ ಮತ್ತು ಸಿ.ಎಸ್.ಕೇಶವ ಚಂದ್ರ ತಂಡದಿಂದ ಕರ್ನಾಟಕ ಶಾಸ್ತ್ರೀಯ ದ್ವಂದ್ವ ವೇಣುವಾದನ ಹಾಗೂ ಸಾಯಿ ವಿಜ್ಞೇಶ್, ಲಕ್ಷ್ಮಿ ನಾಗರಾಜ್‌, ಆನಂದ್ ಎಂ.ಎಲ್. ತಂಡದವರು ‘ಸ್ವರ ವೈಭವ’ ಕಾರ್ಯಕ್ರಮ ನೀಡುವರು ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.