ಮೈಸೂರು: ‘ಜಿ.ಟಿ. ದೇವೇಗೌಡ ಸೇರಿದಂತೆ ಜೆಡಿಎಸ್ನ 12ರಿಂದ 13 ಶಾಸಕರು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಬೇಸರಗೊಂಡಿದ್ದು, ನೋವು ನುಂಗಿಕೊಂಡಿದ್ದಾರೆ. ಈಗ ಅವರೆನ್ನಲ್ಲಾ ಒಗ್ಗೂಡಿಸಲು ಆರಂಭಿಸಿದ್ದೇನೆ. ಮುಂದೆ ಏನೇನಾಗುತ್ತದೋ ನೋಡೋಣ’ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ತಿಳಿಸಿದರು.
ಇಲ್ಲಿ ಸೋಮವಾರ ಜಿ.ಟಿ.ದೇವೇಗೌಡರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷದ ರಾಜ್ಯ ಘಟಕಕ್ಕೆ ಈಗಲೂ ನಾನೇ ಅಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನದು’ ಎಂದರು.
‘ಜಿಟಿಡಿ ಕಳೆದ ವಿಧಾನಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಗೆ ಹೋಗಿದ್ದರೆ ಸಚಿವರಾಗುತ್ತಿದ್ದರು. ಪಕ್ಷವನ್ನು ಬಲಪಡಿಸಲೆಂದು ನಾನೇ ಅವರನ್ನು ಉಳಿಸಿಕೊಂಡೆ. ಈಗ ಅವರ ಕತ್ತು ಕೊಯ್ಯುವ ಕೆಲಸ ನಡೆದಿದೆ. ಎಲ್ಲಾ ವಿಚಾರಗಳ ಬಗ್ಗೆಯೂ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದರು.
‘ಶೀಘ್ರ ರಾಜ್ಯ ಪ್ರವಾಸ ಮಾಡಲಿದ್ದು, ಕೆಲವು ನಾಯಕರನ್ನು ಭೇಟಿಯಾಗಿ, ಮತ್ತೆ ಜಿಟಿಡಿಯವರನ್ನು ಭೇಟಿಯಾಗುತ್ತೇನೆ. ಮೂಲ ಜೆಡಿಎಸ್ ನಮ್ಮದೇ. ಅದರ ಖಾತೆ, ಪಹಣಿ ನಮ್ಮ ಹೆಸರಿನಲ್ಲಿವೆ. ಈಗಲೂ ಎಚ್.ಡಿ. ದೇವೇಗೌಡರು ಬಿಜೆಪಿ ಬಿಟ್ಟು ಬರಲಿ. ಪಕ್ಷವನ್ನು ಕಟ್ಟುತ್ತೇವೆ. ಹೊಸ ಪಕ್ಷವೋ, ಬಲವರ್ಧನೆಯೋ? ಪರಿಸ್ಥಿತಿ ಆಧರಿಸಿ ತೀರ್ಮಾನಿಸುತ್ತೇವೆ. ಕಾಂಗ್ರೆಸ್ನೊಂದಿಗೆ ಹೋಗುವುದಿಲ್ಲ. ತೃತೀಯರಂಗ ಸ್ಥಾಪಿಸುವ ಮನಸ್ಸು ಮಾಡುತ್ತಿದ್ದೇವೆಯಷ್ಟೆ’ ಎಂದರು.
‘ಜೆಡಿಎಸ್ ಮನೆಗೆ ಬೆಂಕಿ ಬಿದ್ದಾಗಿದೆ. ಪಕ್ಷದ ಎಲ್ಲಾ ಶಾಸಕರೂ ಕ್ಷೇತ್ರ ಕಾಪಾಡಿಕೊಳ್ಳಬೇಕು. ಹೀಗಾಗಿ ಒಬ್ಬೊಬ್ಬರೇ ಮಾತನಾಡಲಾರಂಭಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇನ್ನಾದರೂ ಬುದ್ಧಿ ಕಲಿಯಬೇಕು. ಪಕ್ಷವನ್ನು ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು. ಆಗ ಪಕ್ಷವನ್ನು ಉಳಿಸಿಕೊಳ್ಳಬಹುದು. ಪಕ್ಷವು ಬಸ್ ನಿಲ್ದಾಣದಲ್ಲಿ ನಿಂತ ಬಸವಿಯಂತಾಗಿದೆ. ಬಿಜೆಪಿಯನ್ನು ಲವ್ ಮಾಡಿದ್ದಾಯಿತು. ಈಗ ಅವರನ್ನು ಅಲ್ಲೇ ಬಿಟ್ಟು ಬಿಡಬೇಕು’ ಎಂದರು.
‘ನಾನು ಕುಮಾರಸ್ವಾಮಿ ಜೊತೆಯಲ್ಲಿದ್ದಾಗ ಚನ್ನಪಟ್ಟಣದಲ್ಲಿ ₹ 4 ಕೋಟಿ ಖರ್ಚು ಮಾಡಿ, 20ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈಗ ನಾನು ಅವರೊಂದಿಗಿಲ್ಲ. ₹150 ಕೋಟಿ ಖರ್ಚಾದರೂ ಅವರ ಮಗ ನಿಖಿಲ್ 25 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಮುಸ್ಲಿಮರಿಲ್ಲದಿದ್ದರೆ ಪಕ್ಷಕ್ಕೆ ಒಂದು ಸ್ಥಾನವೂ ಬರುವುದಿಲ್ಲವೆಂಬುದು ಖಚಿತವಾಗಿದೆ. ಅವತ್ತು 19 ಜನ ಗೆದ್ದದ್ದು ಮುಸ್ಲಿಮರಿಂದಲೇ ಎಂಬುದೂ ಸಾಬೀತಾಗಿದೆ’ ಎಂದರು.
ಪ್ರಾದೇಶಿಕ ಪಕ್ಷ ಕಟ್ಟುವ ಬಗ್ಗೆ ಸಿ.ಎಂ. ಇಬ್ರಾಹಿಂ ಹೇಳಿಕೊಂಡಿದ್ದಾರೆ. ಶಾಸಕರನ್ನು ಕಟ್ಟಿಕೊಂಡು ಪಕ್ಷಗಳನ್ನು ಕಟ್ಟಲಾಗದು. ಕಾರ್ಯಕರ್ತರು ಬೇಕು. ನಾನು ಅವರು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೆ–ಜಿ.ಟಿ.ದೇವೇಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.