ADVERTISEMENT

ಕನ್ನಡದ ದಾರಿಯಲ್ಲಿ- 14: ‘ವಿವಿದ್‌’ ಓದುವ ಮನೆಯಲ್ಲಿ ಕನ್ನಡದ ಬೆಳಕು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 19:30 IST
Last Updated 19 ನವೆಂಬರ್ 2021, 19:30 IST
ಕುವೆಂಪುನಗರದ ‘ಎನ್‌’ ಬ್ಲಾಕ್‌ನಲ್ಲಿ ‘ವಿವಿದ್‌’ ಓದುವ ಮನೆಯಲ್ಲಿ ಸ್ಪರ್ಧಾರ್ಥಿಗಳು
ಕುವೆಂಪುನಗರದ ‘ಎನ್‌’ ಬ್ಲಾಕ್‌ನಲ್ಲಿ ‘ವಿವಿದ್‌’ ಓದುವ ಮನೆಯಲ್ಲಿ ಸ್ಪರ್ಧಾರ್ಥಿಗಳು   

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಕನಸು ಹೊತ್ತ, ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳಿಗೆ, 2017ರಲ್ಲಿ ‘ಓದುವ ಕೊಠಡಿ’ ತೆರೆದ ನಗರದ ಉಪನ್ಯಾಸಕರೊಬ್ಬರು 2 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಅಧ್ಯಯನಕ್ಕೆ ಉಚಿತವಾಗಿ ನೀಡುತ್ತಿದ್ದಾರೆ!

ಬಿಜಿಎಸ್‌ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಬಿ.ಬೆಟ್ಟಸ್ವಾಮಿ, ಕುವೆಂಪುನಗರದ ‘ಎನ್‌’ ಬ್ಲಾಕ್‌ನಲ್ಲಿ ‘ವಿವಿದ್‌ ಓದುವ ಮನೆ’ಯನ್ನು ತೆರೆದವರು. ಓದಲು ಉಚಿತ ಸ್ಥಳಾವಕಾಶ ನೀಡುವುದಲ್ಲದೆ, ಇಲ್ಲಿನ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

ಎಸ್‌ಬಿಎಂ ಬಡಾವಣೆಯಲ್ಲಿರುವ ಅವರ ಮನೆಯಲ್ಲಿಯೂ 10 ಸಾವಿರಕ್ಕೂ ಹೆಚ್ಚು ಕನ್ನಡ ಸಾಹಿತ್ಯದ ಪುಸ್ತಕಗಳಿವೆ. ಓದುವ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ರೂಢಿಸುವುದಕ್ಕೆ ಅವು ಮೀಸಲು. ವಿದ್ಯಾರ್ಥಿಗಳಿಗೆ ಕೇಳಿದ ಪುಸ್ತಕಗಳನ್ನು ನೀಡುವುದಷ್ಟೇ ಅಲ್ಲ, ಆ ಪುಸ್ತಕದ ಕುರಿತು ಅವರು ಸಂವಾದ ಏರ್ಪಡಿಸುತ್ತಾರೆ. ಕನ್ನಡ ಸಾಹಿತ್ಯ ಓದುತ್ತಿರುವ ಪದವಿ ವಿದ್ಯಾರ್ಥಿಗಳಿಗೆ ಕೆ–ಸೆಟ್‌, ನೆಟ್‌ ಪರೀಕ್ಷೆ ತಯಾರಿಯ ಪೂರಕ ಪುಸ್ತಕಗಳು ಓದುವ ಮನೆಯಲ್ಲಿ ಲಭ್ಯ.

ADVERTISEMENT

‘ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ ಸಿಗುತ್ತಿದ್ದರೂ, ಹೊಸ ಪುಸ್ತಕಗಳು ದೊರೆಯುವುದು ತಡವಾಗಿ. ಸಿಕ್ಕರೂ ಎಲ್ಲರಿಗೂ ಲಭ್ಯವಾಗದು. ಪರಾಮರ್ಶನ ಗ್ರಂಥಗಳ ಜೊತೆಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನದ ಜ್ಞಾನ ಅಗತ್ಯ. ಹೀಗಾಗಿಯೇ ಪುಸ್ತಕಗಳೊಂದಿಗೆ ಪರೀಕ್ಷೆಗಳಿಗಾಗಿಯೇ ಇರುವ ನಿಯತಕಾಲಿಕೆಗಳು, ವೃತ್ತ ಪತ್ರಿಕೆಗಳು ಓದುವ ಮನೆ ಲಭ್ಯವಿವೆ’ ಎಂದು ಬೆಟ್ಟಸ್ವಾಮಿ ತಿಳಿಸಿದರು.

‘ನಾನು ವಿದ್ಯಾರ್ಥಿಯಾಗಿದ್ದಾಗ ಮಾರ್ಗದರ್ಶನ ನೀಡುವವರು ಯಾರೂ ಇರಲಿಲ್ಲ. ಇಂಥ ಪುಸ್ತಕ ಈ ಪರೀಕ್ಷೆಗೆ ಸಹಾಯಕ ಎಂಬುದನ್ನು ತಿಳಿಸುವವರೂ ಇರಲಿಲ್ಲ. ಹೀಗಾಗಿಯೇ ವಿವಿದ್‌ ಓದುವ ಮನೆಯನ್ನು ತೆರೆಯಲಾಗಿದೆ. ವಿವಿದ್‌ ಎಂದರೆ ಬೆಳಕು. ಯಾರೂ ಬೇಕಾದರೂ ಬಂದು ಓದಿನ ಬೆಳಕು ಕಾಣಬಹುದು. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉದ್ಯೋಗ ಕಂಡುಕೊಂಡರಷ್ಟೇ ಸಾಕು. ಇದೀಗ ಉದ್ಯೋಗ ಕಂಡುಕೊಂಡವರು ನೆರವಾಗುತ್ತಿದ್ದಾರೆ. ಪುಸ್ತಕಗಳನ್ನು ನೀಡುತ್ತಿದ್ದಾರೆ. ಹೀಗೆ ಪುಸ್ತಕ ಹಂಚುವ ಕೆಲಸ ಮುಂದುವರಿದಿದೆ’ ಎಂದು ಹೇಳಿದರು.

‘ವಿವಿದ್‌ ಓದುವ ಮನೆ’ಯಲ್ಲಿ ಓದಿದ ಬಹುತೇಕರು ಕೆಪಿಎಸ್‌ಸಿ,ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಪೊಲೀಸ್, ಎಸ್‌ಡಿಎ, ಎಫ್‌ಡಿಎ, ಶಿಕ್ಷಕ, ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

‘ಬೇಕಾದ ಪುಸ್ತಕಗಳನ್ನು ಪ್ರತಿ ತಿಂಗಳೂ ಓದುವ ಮನೆಯಲ್ಲಿ ಸೇರ್ಪಡೆ ಆಗುತ್ತಿದ್ದವು. 2017ರಿಂದಲೂ ಇಲ್ಲಿಯೇ ಎಲ್ಲ ಪರೀಕ್ಷೆಗಳಿಗೆ ತಯಾರಿನಡೆಸಿದೆ. 2020ರಲ್ಲಿ ನಡೆದ ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಡಿವೈಎಸ್‌ಪಿ ಆಗುವುದು ನನ್ನ ಕನಸು. ಇದಕ್ಕೆ ತಯಾರಿ ಮುಂದುವರಿಸಿದ್ದೇನೆ’ ಎಂದು ಬಡಗಲಪುರದ ಬಿ.ಜೆ.ಪ್ರಸನ್ನ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.