ADVERTISEMENT

ಮೈಸೂರು: ವಿಟಿಯುನಿಂದ ಬಡ ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 11:15 IST
Last Updated 19 ಫೆಬ್ರುವರಿ 2026, 11:15 IST
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)   

ಮೈಸೂರು: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಬಡ ವಿದ್ಯಾರ್ಥಿಗಳಿಗೆಂದು ‘ವಿದ್ಯಾನಿಧಿ’ ಯೋಜನೆ ಆರಂಭಿಸಲಾಗಿದ್ದು, ಈವರೆಗೆ ₹ 60 ಲಕ್ಷ ಸಂಗ್ರಹವಾಗಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್ ತಿಳಿಸಿದರು.

ಇಲ್ಲಿನ ಸಾತಗಳ್ಳಿಯಲ್ಲಿರುವ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಗುರುವಾರ ಆರಂಭವಾದ ‘ಯುಕ್ತಿ–2026’ ಪ್ರಾದೇಶಿಕ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಾರ್ಷಿಕ ₹ 35ಸಾವಿರ ಕಟ್ಟಲು ಸಾಧ್ಯವಾಗದ ಬಹಳಷ್ಟು ವಿದ್ಯಾರ್ಥಿಗಳು ಸಹಾಯ ಕೋರಿ ನನ್ನ ಬಳಿಗೆ ಬರುತ್ತಾರೆ. ಅಂಥವರ ನೆರವಿಗಾಗಿ ವಿದ್ಯಾನಿಧಿ ಆರಂಭಿಸಿದ್ದೇನೆ. ವಂತಿಗೆ ಸಂಗ್ರಹದ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಅದರಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಭರಿಸಲಾಗುವುದು’ ಎಂದು ಹೇಳಿದರು.

‘2030ರ ವೇಳೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಕಂಡುಬರಲಿವೆ. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಈಗ ಇರುವ ಉದ್ಯೋಗಗಳು 2030ಕ್ಕೆ ಇರುವುದಿಲ್ಲ. ಈಗ ಕಂಪ್ಯೂಟರ್‌ ಸೈನ್ಸ್‌ ಕಲಿತ ಶೇ 85ರಷ್ಟು ವಿದ್ಯಾರ್ಥಿಗಳು ಕೆಲಸ ಪಡೆಯುತ್ತಿದ್ದಾರೆ. ಆದರೆ, ಮುಂದೆ ಅಂತಹ ಉದ್ಯೋಗಗಳೇ ಇರುವುದಿಲ್ಲ. ಸಾಫ್ಟ್‌ವೇರ್‌ ಎಂಜಿನಿಯರ್‌, ಕೋಡಿಂಗ್‌ ಕೆಲಸಕ್ಕೆ ಜನ ಬೇಕಾಗುವುದಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುವ ಪಲ್ಲಟಗಳನ್ನು ತಿಳಿದುಕೊಂಡು, ಅದಕ್ಕೆ ತಕ್ಕಂತೆ ಜ್ಞಾನ ಮತ್ತು ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಎಐ (ಕೃತಕ ಬುದ್ಧಿಮತ್ತೆ) ದಾಂಗುಡಿ ಇಟ್ಟಿರುವ ಪರಿಣಾಮ ಹೊಸ ತಂತ್ರಜ್ಞಾನವನ್ನು ಕಲಿಯಲು ಮುಂದಾಗಬೇಕು. ಬದಲಾವಣೆಗೆ ಸಜ್ಜಾಗುವಂತೆ ಅಥವಾ ಕೆಲಸ ಬಿಡಲು ತಯಾರಾಗುವಂತೆ ಗೂಗಲ್ ಕಂಪನಿಯ ಸಿಇಒ ಸುಂದರ್‌ ಪಿಚೈ ಕಂಪನಿಯ ಉದ್ಯೋಗಿಗಳಿಗೆ ಸಂದೇಶ ನೀಡಿದ್ದಾರೆ. ಎಐ ಇಂದು ಮಾನವನ ಬುದ್ಧಿಮತ್ತೆಯನ್ನು ಮೀರಿ ಮುಂದೆ ಸಾಗುತ್ತಿದೆ. ಈಗ, ಆರ್ಟಿಫಿಸಿಯಲ್ ಸೂಪರ್ ಇಂಟಲಿಜೆನ್ಸ್ (ಎಎಸ್‌ಐ) ಬೇಕಾಗಿದೆ. ಎಐ ನಿಯಂತ್ರಿಸಲು ಎಎಸ್‌ಐ ಬರಲಿದೆ’ ಎಂದರು.

‘ವಿಟಿಯುನಿಂದ ಪದವಿ ಪಡೆದು ಹೊರಬೀಳುವ ಪ್ರತಿ ವಿದ್ಯಾರ್ಥಿಯೂ ಉದ್ಯೋಗಿ ಆಗಬೇಕು ಎಂಬುದು ನನ್ನ ಕನಸಾಗಿದೆ.‌ ಅದರಂತೆ ಹಲವು ಕಾರ್ಯಕ್ರಮ ರೂಪಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.