
ಮೈಸೂರು: ಕುಸ್ತಿಪಟು, ಸುಣ್ಣದಕೇರಿ ನಿವಾಸಿ ‘ಟೈಗರ್’ ಬಾಲಾಜಿ ಜೆಟ್ಟಿ (68) ಅನಾರೋಗ್ಯದಿಂದ ಇಲ್ಲಿನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಅವರಿಗೆ ಪುತ್ರ ಇದ್ದಾರೆ. ಕೆಲ ವರ್ಷದ ಹಿಂದೆ ಪತ್ನಿ ಮತ್ತು ಮತ್ತೊಬ್ಬ ಪುತ್ರ ಮೃತಪಟ್ಟಿದ್ದರು.
ಆಕ್ರಮಣಕಾರಿ ಪಟ್ಟು, ಆಟದಿಂದ ನಾಡಕುಸ್ತಿ ಪ್ರಿಯರಲ್ಲಿ ‘ಟೈಗರ್’ ಎಂದೇ ಖ್ಯಾತರಾಗಿದ್ದ ಅವರು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ 350ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಗೆದ್ದಿದ್ದರು. ಮೈಸೂರಿನ ಕುಸ್ತಿ ಪರಂಪರೆಯಲ್ಲಿ ಅಚ್ಚಳಿಯದ ಹೆಸರು ಮಾಡಿದ್ದರು.
ಅಂಬಾವಿಲಾಸ ಅರಮನೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವದ ವಿಜಯದಶಮಿಯಂದು ನಡೆಯುವ ವಜ್ರಮುಷ್ಠಿ ಕಾಳಗದ ಉಸ್ತಾದ್ ಆಗಿ ದಶಕಗಳಿಂದ ನೂರಾರು ಪೈಲ್ವಾನರಿಗೆ ತರಬೇತಿ ನೀಡಿದ್ದರು. ತಾತ ರಾಮಜೆಟ್ಟಪ್ಪ ಅಗರಬತ್ತಿ ಉದ್ಯಮಿಯಾಗಿದ್ದರೆ, ತಂದೆ ಎಂ.ಆರ್.ಸುದರ್ಶನ್ ಅಥ್ಲೀಟ್ ಆಗಿದ್ದರು. ಜೆಟ್ಟಿ ಸಮುದಾಯ ಹಾಗೂ ನಾಡಕುಸ್ತಿ ಬೆಳವಣಿಗೆಗೆ ಅವರು ಶ್ರಮಿಸಿದ್ದರು.
ಚಾಮುಂಡಿ ಬೆಟ್ಟ ತಪ್ಪಲಿನ ರುದ್ರಭೂಮಿಯಲ್ಲಿ ಶನಿವಾರ (ಜ.31) ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.