ಹಟ್ಟಿ ಚಿನ್ನದಗಣಿ: ‘ಸಂಘ ವಿರೋಧಿ ಚಟುವಟಿಕೆ ಹಾಗೂ ಗೋವಾ ಗ್ಯಾಂಗ್ ಅಂಡ್ ಟೀಂ ಮತ್ತು ಬ್ಲಾಕ್ ಮೇಲ್ ಮಾಡುವ ಜನರಿಗೆ ಎಐಟಿಯುಸಿಯಲ್ಲಿ ಜಾಗವಿಲ್ಲ’ ಎಂದು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ತಕ್ಕಡಿ ಗುರುತಿನ ಎಐಟಿಯುಸಿ ಸಂಘಟನೆ 105 ವರ್ಷಗಳಷ್ಟು ಬಲಿಷ್ಠ ಸಂಘಟನೆಯಾಗಿದೆ. ಸಂಘದ ಉಪಾಧ್ಯಕ್ಷರಾಗಿದ್ದ ಶಾಂತಪ್ಪ ಆನ್ವರಿ ಅವರು 3 ವರ್ಷದ ಅಧಿಕಾರ ಅವಧಿಯಲ್ಲಿ ನಾಲ್ಕು ಜನರ ಗುಂಪು ಕಟ್ಟಿಕೊಂಡು ಗೋವಾಕ್ಕೆ ತೆರಳಿ ಅಲ್ಲಿ ಮಜಾ ಮಾಡಿ ಬಂದಿದ್ದು ಕಾರ್ಮಿಕರಿಗೆ ಗೊತ್ತಿರುವ ಸಂಗತಿಯಾ ಗಿದೆ. ಅಧ್ಯಕ್ಷ ಎಸ್.ಎಂ.ಶಫಿ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ಬಿಟ್ಟುಕೊಡಬೇಕು ಎಂದು ಬ್ಲಾಕ್ ಮೇಲ್ ಮಾಡಿರುವುದನ್ನು ಸಂಘ ಸಹಿಸುವುದಿಲ್ಲ’ ಎಂದು ಹೇಳಿದರು.
‘ಕೆಲವರಿಗೆ ಟಿಕೆಟ್ ನೀಡಬೇಡಿ ಎಂದು ಕಾರ್ಮಿಕರೇ ನಿರ್ಧಾರ ಮಾಡಿದ ಕಾರಣ ಕೆಲ ಮುಖಂಡರಿಗೆ ಟಿಕೆಟ್ ನೀಡಿಲ್ಲ. ಎಐಟಿಯುಸಿ ಈ ಬಾರಿ 19 ಜನ ಹೊಸ ಕಾರ್ಮಿಕರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ’ ಎಂದರು.
‘ಹೊಸ ವೇತನ ಒಪ್ಪಂದ, ಮೆಡಿಕಲ್ ಅನ್ಫಿಟ್ ಯೋಜನೆ ಜಾರಿಗೆ ಹಗಲಿರುಳು ಶ್ರಮಿಸಿ ರುವುದು ಸೇರಿ ಹತ್ತು ಹಲವು ಕಾರ್ಮಿಕಪರ ಕೆಲಸ ಮಾಡಿದ ತೃಪ್ತಿ ಇದೆ. 6 ಜನ ಹಳಬರು ಸೇರಿ 25 ಜನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ನಾಮಪತ್ರ ಸಲ್ಲಿಸಲಾಗಿದೆ’ ಎಂದು ಹೇಳಿದರು.
‘ಗಣಿ ಕಂಪನಿಯಲ್ಲಿ ಚುನಾವಣೆ ಆರಂಭವಾದಾಗಿನಿಂದ 40 ವರ್ಷ ಎಐಟಿಯುಸಿ ಅಧಿಕಾರದಲ್ಲಿದೆ. ಸಂಘಟನೆಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಭರವಸೆ ಇದೆ’ ಎಂದರು.
ಸಂಘಟನೆಯ ರಾಜ್ಯ ಸಮಿತಿಯ ಆದಿಮೂರ್ತಿ, ಬಸವರಾಜ, ಶಮೀರ್, ಪ್ರಮುಖರಾದ ತಿಪ್ಪಣ್ಣ, ನಾಗರೆಡ್ಡಿ ಜೇರಬಂಡಿ, ಮರಿಯಪ್ಪ, ಕನಕರಾಜ ಗೌಡ ಗುರೀಕಾರ್, ಸಲೀಂ ಪಾಷಾ, ಅಬ್ರಾಹಂ, ನಾಗರಾಜ, ರಂಗನಾಥ, ಶ್ರೀಕಾಂತ ನಾಯಿಕೋಡಿ ಹಾಗೂ ಬಾಬು ಉಪ ಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.