ADVERTISEMENT

ಕೋವಿಡ್‌ ಭೀತಿ: ನ್ಯಾಯಾಲಯ ಕಲಾಪದಿಂದ ದೂರ ಉಳಿಯಲು ವಕೀಲರ ಸಂಘ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 15:52 IST
Last Updated 18 ಮಾರ್ಚ್ 2020, 15:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು:ಕೊರೊನಾ ಸೋಂಕಿನ ಭೀತಿ ಇರುವುದರಿಂದ ತುರ್ತು ಪ್ರಕರಣಗಳನ್ನು ಹೊರತುಪಡಿಸಿ ನ್ಯಾಯಾಲಯ ಕಲಾಪದಿಂದ ದೂರ ಉಳಿಯಲು ರಾಯಚೂರು ವಕೀಲರ ಸಂಘವು ನಿರ್ಧರಿಸಿದೆ.

ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಹೈಕೋರ್ಟ್ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರ ನಿರ್ದೇಶನದಂತೆ ಈ ಬಗ್ಗೆ ತೀರ್ಮಾನಿಸಲಾಗಿದೆ.

ಉಭಯ ಪಕ್ಷಗಳ ವಕೀಲರು ಹಾಜರಾದರೆ ಮಾತ್ರ ವಿಚಾರಣೆ ನಡೆಯುವುದರಿಂದ ಕಕ್ಷಿದಾರರು ಯಾವುದೇ ರೀತಿಯ ಅತಂಕಪಡುವ ಆಗತ್ಯವಿಲ್ಲ. ವಕೀಲರು ಹಾಗೂ ಕಕ್ಷಿದಾರರು ಯಾವುದೇ ಪ್ರಕರಣದಲ್ಲಿ ಹಾಜರಾಗದೇ ಇದ್ದಲ್ಲಿ ಹೈಕೋರ್ಟ್ ನಿರ್ದೇಶನದ ಆದೇಶದ ಹಿನ್ನೆಲೆ ವ್ಯತಿರಿಕ್ತ ಆದೇಶ ನೀಡುವುದಿಲ್ಲ ಎಂಬ ಭರವಸೆಯೊಂದಿಗೆ ಕಲಾಪದಿಂದ ದೂರವಿರಲು, ತುರ್ತು ಸಂದರ್ಭ ಹೊರತು ಪಡಿಸಿ ಕಕ್ಷಿದಾರರಿಗೆ ನ್ಯಾಯಾಲಯಕ್ಕೆ ಹಾಜರಾಗದಂತೆ ಸೂಚಿಸಲು ವಕೀಲರ ಸಂಘ ನಿರ್ಣಯಿಸಿದೆ.

ADVERTISEMENT

ಈಗಾಗಲೇ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯದ ಸಮನ್ಸ್‌ ಮತ್ತು ವಾರೆಂಟ್ ಪಡೆದ ಸಾಕ್ಷಿದಾರರಿಗೆ ಹಾಜರಾಗದಂತೆ ಎಲ್ಲಾ ಅಭಿಯೋಜಕರಿಗೆ ಎಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಿಂದ ನಿರ್ದೇಶನ ನೀಡಲು ವಿನಂತಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.