ADVERTISEMENT

ಚಿಲ್ಲರೆ ವಹಿವಾಟು ಪರಿಶೀಲಿಸಿದ ಜಿಲ್ಲಾಧಿಕಾರಿ

ದರ ಹೆಚ್ಚಳ ತಡೆಗಟ್ಟಲು ಕ್ರಮವಹಿಸಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 27 ಮೇ 2021, 14:48 IST
Last Updated 27 ಮೇ 2021, 14:48 IST
ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಗುರುವಾರ ನಗರದ ವಿವಿಧೆಡೆ ಸಂಚರಿಸಿ ತರಕಾರಿ ಮತ್ತು ದಿನಸಿ ದರಗಳನ್ನು ಪರಿಶೀಲಿಸಿದರು
ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಗುರುವಾರ ನಗರದ ವಿವಿಧೆಡೆ ಸಂಚರಿಸಿ ತರಕಾರಿ ಮತ್ತು ದಿನಸಿ ದರಗಳನ್ನು ಪರಿಶೀಲಿಸಿದರು   

ರಾಯಚೂರು: ದಿನಸಿ ಹಾಗೂ ತರಕಾರಿ ಖರೀದಿಸುವುದಕ್ಕೆ ಜನರಿಗೆ ಗುರುವಾರ ಅವಕಾಶ ನೀಡಿರುವುದನ್ನು ವ್ಯಾಪಾರಿಗಳು ಅವಕಾಶ ಮಾಡಿಕೊಂಡು ಸುಲಿಗೆ ಮಾಡದಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿತ್ತು. ಆದರೂ ವಸ್ತುಸ್ಥಿತಿ ಅರಿಯಲು ಸ್ವತಃ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ದಿನಸಿ ಅಂಗಡಿಗಳಿಗೆ ಮತ್ತು ತರಕಾರಿ ಮಾರಾಟಗಾರರಲ್ಲಿಗೆ ತೆರಳಿ ಪರಿಶೀಲಿಸಿದ್ದು ವಿಶೇಷವಾಗಿತ್ತು.

ಕೇಂದ್ರ ಬಸ್ ನಿಲ್ದಾಣ ಮಾರ್ಗ, ಮಹಾವೀರ ಸರ್ಕಲ್, ತೀನ್ ಕಂದೀಲ್, ಬಟ್ಟೆ ಬಜಾರ್, ಸರ್ದಾರ್‌ ವಲ್ಲಭಬಾಯ್‌ ಪಟೇಲ್ ರಸ್ತೆ, ಚಂದ್ರಮೌಳೇಶ್ವರ ಸರ್ಕಲ್, ಬಸವನಬಾವಿ ಸರ್ಕಲ್, ಗಂಜ್ ಸರ್ಕಲ್ ಹಾಗೂ ಮಹಿಳಾ ಸಮಾಜ ಮೈದಾನ ಸೇರಿದಂತೆ ವಿವಿಧೆಡೆ ಸುತ್ತಾಡಿದರು.

ಕೆಲವೆಡೆ ಮಾಸ್ಕ್ ಧರಿಸದೇ ಗ್ರಾಹಕರಿಗೆ ಕಿರಾಣಿ ವಸ್ತುಗಳನ್ನು ವಿತರಿಸುತ್ತಿದ್ದ ಅಂಗಡಿ ಮಾಲೀಕರ ಮೇಲೆ ದೂರು ದಾಖಲಿಸುವಂತೆ ನಗರಸಭೆ ಪೌರಾಯುಕ್ತ ವೆಂಕಟೇಶ್ ಹಾಗೂ ತಂಡಕ್ಕೆ ಸೂಚಿಸಿದರು. ದಿನಸಿ ಖರೀದಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಅಲ್ಲಿದ್ದ ಗ್ರಾಹಕರಿಗೆ ಅರಿವು ಮೂಡಿಸಿದರು.

ADVERTISEMENT

ಬಸವನಬಾವಿ ವೃತ್ತದಲ್ಲಿ ತರಕಾರಿ ಮಾರಾಟಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾಡಳಿತ ನಿಗದಿ ಪಡಿಸಿದ ದರದಂತೆಯೇ ಗ್ರಾಹಕರಿಗೆ ತರಕಾರಿಗಳನ್ನು ಮಾರಾಟ ಮಾಡಬೇಕು. ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು. ಮುಖ್ಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದುವರಿಸಲಾಗಿದೆ. ಜೀವನೋಪಾಯಕ್ಕಾಗಿ ಅಗತ್ಯ ವಸ್ತುಗಳ ಖರೀದಿಗೆ ಮೇ 27 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.