
ಲಿಂಗಸುಗೂರು: ‘ತಾಲ್ಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ರೇಣುಕಾಚಾರ್ಯರ ಜಯಂತಿ ಆಚರಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಜಂಗಮ ಸಮಾಜದ ಮುಖಂಡರು ಆಗ್ರಹಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಗ್ರೇಡ್-2 ತಹಶೀಲ್ದಾರ್ ಬಸವರಾಜ ಝಳಕಿಮಠ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಜಂಗಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭುಸ್ವಾಮಿ ಅತ್ನೂರು ಮಾತನಾಡಿ, ‘ಕೆಲ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸುತ್ತಿಲ್ಲ. ಜಯಂತಿ ಸಂದರ್ಭದಲ್ಲಿ ರೇಣುಕಾಚಾರ್ಯರು ಸೇರಿ ಮಹನೀಯರ ಭಾವಚಿತ್ರಗಳ ಮೆರವಣಿಗೆಗೆ ಕಸ ತುಂಬುವ ಟ್ರ್ಯಾಕ್ಟರ್ಗಳನ್ನು ಬಿಟ್ಟು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ಬಸವರಾಜ ಝಳಕಿಮಠ ಮಾತನಾಡಿ, ‘ಎಲ್ಲಾ ಕಚೇರಿಗಳಲ್ಲಿ ರೇಣುಕಾಚಾರ್ಯರ ಜಯಂತಿ ಆಚರಿಸುವಂತೆ ಸರ್ಕಾರ ಆದೇಶ ಮಾಡಿದೆ. ಮಾ.1ರಂದು ತಾಲ್ಲೂಕು ಆಡಳಿತಸೌಧದಲ್ಲಿ ಬೆಳಿಗ್ಗೆ 10 ಗಂಟೆಗೆ ಜಯಂತಿ ಆಚರಿಸಲಾಗುತ್ತಿದೆ, ಅಧಿಕಾರಿಗಳು, ಸಾರ್ವಜನಿಕರು, ಜಂಗಮ ಸಮಾಜದವರು ಭಾಗವಹಿಸಿ’ ಎಂದು ಕೋರಿದರು.
ಮುಖಂಡರಾದ ಮಹದೇವಯ್ಯಸ್ವಾಮಿ, ಮಹೇಶ ನಂದಿಕೋಲಮಠ, ಜಂಬಯ್ಯ ಹಿರೇಮಠ, ಸಂತೋಷ ಸೊಪ್ಪಿಮಠ, ವೀರೇಶ ಜಗವತಿಮಠ, ಆದಯ್ಯ ಸ್ವಾಮಿ, ವಿರೂಪಾಕ್ಷಯ್ಯ ಹಿರೇಮಠ, ಶರಣಯ್ಯ ದಾಸೋಹಮಠ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.