ADVERTISEMENT

‘ಸಮಾಜ ಬೆಳೆಯಲು ಶಿಕ್ಷಣ ಮುಖ್ಯ’

ಸವಿತಾ ಮಹರ್ಷಿಯ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 13:34 IST
Last Updated 11 ಫೆಬ್ರುವರಿ 2020, 13:34 IST
ರಾಯಚೂರಿನ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಮದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿಯ ಜಯಂತಿಯ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಅವರು ಉದ್ಘಾಟಿಸಿ ಮಾತನಾಡಿದರು
ರಾಯಚೂರಿನ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಮದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿಯ ಜಯಂತಿಯ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಅವರು ಉದ್ಘಾಟಿಸಿ ಮಾತನಾಡಿದರು   

ರಾಯಚೂರು:ಸವಿತಾ ಸಮಾಜವು ಚಿಕ್ಕ ಸಮಾಜವಾಗಿದ್ದು ಶಿಕ್ಷಣ, ಸಂಘಟನೆ ಮೂಲಕವೇ ಸಮಾಜವನ್ನು ಬೆಳೆಸಲು ಸಮಾಜದ ಮುಖಂಡರು ಮುಂದಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ಹೇಳಿದರು.

ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಮದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿಯ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸವಿತಾ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದು ಬಹುತೇಕ ಕುಲವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿದೆ.ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.

ADVERTISEMENT

ಸಮಾಜದ ಉನ್ನತ ಸ್ದಾನದಲ್ಲಿರುವ ಮುಖಂಡರು ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡುವುದರ ಜೊತೆಗೆ ಸಮಾಜದ ಏಳಿಗೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆಲೋಚನಾ ಶಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಮಾನವೀಯ ಮೌಲ್ಯಗಳು, ದೇಶಪ್ರೇಮ ಹಾಗೂ ಸಂಸ್ಕಾರ ಗುಣಗಳನ್ನುಬೆಳೆಸುವುದರ ಜೊತೆಗೆ ಹಿರಿಯರು ನೀಡಿದ ಸಂದೇಶಗಳನ್ನು ನೀಡಬೇಕು ಎಂದು ತಿಳಿಸಿದರು.

ಸವಿತಾ ಮಹರ್ಷಿ ಕೇವಲ ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲ. ಇಡೀ ಮಾನವ ಕುಲಕ್ಕೆ ಮಾದರಿಯಾಗಿದ್ದು ಅವರ ಚಿಂತನೆ, ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ಹೇಳಿದರು.

ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್ ಇಟಗಿ ಮಾತನಾಡಿ, ಸವಿತಾ ಸಮಾಜವೂ ಪುರಾತನ ಕಾಲದಿಂದಲೂ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನ ಹೆಸರಿನಲ್ಲಿ ಗುರುತಿಸಲಾಗುತ್ತಿದೆ. ಬುದ್ಧನ ನಂದ ಸಾಮ್ರಾಜ್ಯ, ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿಯೂ ಕ್ಷೌರಿಕ ವೃತ್ತಿಯನ್ನೇ ಗೌರವಿಸಿ ತಮ್ಮನ್ನು ತೊಡಗಿಸಿಕೊಳ್ಳತ್ತಿದ್ದರು ಎಂದು ತಿಳಿಸಿದರು.

ಸವಿತಾ ಮಹರ್ಷಿಯಂತೆ ಹಲವಾರು ಮಹಾತ್ಮರು ವಿವಿಧ ಕಾಲಘಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇತಿಹಾಸದಿಂದ ತಿಳಿಯಬಹುದಾಗಿದೆ. ಆದರೆ ಈಗ ಹಲವಾರು ಅಡೆತಡೆಗಳ ನಡುವೆಯೂ ಸ್ವಾವಲಂಬಿಗಳಾಗಿ ಜೀವನ ನಡೆಸುತಿದ್ದಾರೆ ಎಂದು ಹೇಳಿದರು.

ಕ್ಷೌರಿಕ ವೃತ್ತಿಯನ್ನೇ ನಂಬಿ ಬದುಕುತ್ತಿರುವ ಸವಿತಾ ಸಮಾಜ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಂಪರಾಗತವಾಗಿ ಸವಿತಾ ಸಮಾಜ ಈ ವೃತ್ತಿ ಮಾಡುತ್ತಿದ್ದು ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರ್ಕಾರ ಹಾಗೂ ಸಮಾಜದ ಮುಂಡರದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭಿಸುವ ಪೂರ್ವ ಶ್ರೀ ಶಂಕುಚಕ್ರ ಮಾರುತಿ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ರಂಗಮಂದಿರದವರೆಗೆ ಸವಿತಾ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ನಡೆಯಿತು.

ವೇದಿಕೆಯಲ್ಲಿಸಮಾಜದ ಮುಖಂಡರಾದ ರಾಘವೇಂದ್ರ ಇಟಗಿ, ವಿ.ಗೋವಿಂದ, ಭೀಮೇಶ, ಎಸ್.ಅನಿಲ್ ಕುಮಾರ, ಚಲಪತಿ, ಶ್ರೀನಿವಾಸ ಕಲವಲದೊಡ್ಡಿ, ನಾಗರಾಜ, ನರಸಿಂಹಲು, ಗೋಪಾಲ, ಉರುಕುಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.