ADVERTISEMENT

ಜಮೀನಿನ ತೇವಾಂಶ ಹೆಚ್ಚಿಸಿದ ಬಸಿ ನೀರು: ರೈತರಿಗೆ ಸಂಕಷ್ಟ

ರಾಂಪೂರ ಏತ ನೀರಾವರಿ ಯೋಜನೆ ಕಾಮಗಾರಿ ಅನುಷ್ಠಾನ ವೈಫಲ್ಯ ಆರೋಪ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಅಕ್ಟೋಬರ್ 2021, 2:57 IST
Last Updated 5 ಅಕ್ಟೋಬರ್ 2021, 2:57 IST
ಲಿಂಗಸುಗೂರು ತಾಲ್ಲೂಕು ಸರ್ಜಾಪುರ ಬಳಿ ಅಕ್ವಾಡೆಕ್ಟ್ 1.400ಕಿ.ಮೀದಲ್ಲಿ ಬಸಿ ನೀರಿನಿಂದ ರೈತರ ಜಮೀನು ಅಲ್ಲಲ್ಲಿ ಜಲಾವೃತಗೊಂಡು ತೇವಾಂಶ ಹೆಚ್ಚಳಗೊಂಡಿರುವುದು
ಲಿಂಗಸುಗೂರು ತಾಲ್ಲೂಕು ಸರ್ಜಾಪುರ ಬಳಿ ಅಕ್ವಾಡೆಕ್ಟ್ 1.400ಕಿ.ಮೀದಲ್ಲಿ ಬಸಿ ನೀರಿನಿಂದ ರೈತರ ಜಮೀನು ಅಲ್ಲಲ್ಲಿ ಜಲಾವೃತಗೊಂಡು ತೇವಾಂಶ ಹೆಚ್ಚಳಗೊಂಡಿರುವುದು   

ಲಿಂಗಸುಗೂರು: ನವಲಿ-ರಾಂಪೂರ ಜಡಿಶಂಕರಲಿಂಗ ಏತ ನೀರಾವರಿ ಯೋಜನೆಯಡಿ ಅವೈಜ್ಞಾನಿಕವಾಗಿ ಅನುಷ್ಠಾನಗೊಂಡ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಮಣ್ಣಿನ ಏರಿ ಪ್ರದೇಶಗಳ ಸುತ್ತಮುತ್ತಲ ಜಮೀನುಗಳಲ್ಲಿ ಬಸಿ ನೀರಿನಿಂದ ತೇವಾಂಶ ಹೆಚ್ಚಳ ಆಗಿದ್ದು ರೈತ ಸಮೂಹ ಸಂಕಷ್ಟ ಎದುರಿಸುವಂತಾಗಿದೆ.

ನಾಲ್ಕು ವರ್ಷಗಳ ಹಿಂದೆ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಂದಿನಿಂದ ಇಂದಿನವರೆಗೂ ಸಮರ್ಪಕ ನೀರು ಹರಿಯದೆ ಹೋಗಿದ್ದರಿಂದ ಬಹುತೇಕ ರೈತರ ಜಮೀನಿಗೆ ನೀರು ಮರೀಚಿಕೆಯಾಗಿವೆ. ಅಲ್ಪಸ್ವಲ್ಪ ಪ್ರಮಾಣದ ನೀರಿನಿಂದ ಕೆಲ ಪ್ರದೇಶಗಳಲ್ಲಿ ಬಸಿನೀರು ಜಮೀನುಗಳಿಗೆ ಹರಿದು ಕೃಷಿ ಚಟುವಟಿಕೆಗೆ ತೊಂದರೆ ಆಗಿದೆ ಎಂದು ರೈತರು ದೂರಿದ್ದಾರೆ.

ಏತ ನೀರಾವರಿ ಯೋಜನೆ 20ನೇ ಕಿ.ಮೀ ದಿಂದ 27ನೇ ಕಿ.ಮೀ ಹಾಗೂ 2 ವಿತರಣಾ ನಾಲೆ, 14 ಮೈನರ್‍ ಕಾಲುವೆಗಳು ಒಂದು ಕೊನೆ ಭಾಗದ ವಿತರಣಾ ನಾಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕುಪ್ಪಿಗುಡ್ಡ, ಸರ್ಜಾಪುರ, ಕರಡಕಲ್ಲ, ಗುಡದನಾಳ, ಯಲಗಲದಿನ್ನಿ, ಹೊನ್ನಳ್ಳಿ, ದೇವರಭೂಪುರ, ಯರಡೋಣಿ, ಮೇದಿನಾಪುರ ಸೇರಿದಂತೆ ಗ್ರಾಮೀಣ ರೈತರು ಕಳಪೆ ಕಾಮಗಾರಿ ತಡೆಯುವಂತೆ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ADVERTISEMENT

ಪೂರ್ವ ಕಾಲುವೆ 27ನೇ ಕಿ.ಮೀ ವ್ಯಾಪ್ತಿಯ ಕೊನೆಯ ಭಾಗದ ವಿತರಣಾ ನಾಲೆ (ಟೇಲ್‍ ಎಂಡ್‍ ಡಿಸ್ಟ್ರಿಬ್ಯೂಟರಿ) 1.400ಕಿ.ಮೀ ಅಕ್ವಾಡೆಕ್ಟ್‌, ಮಣ್ಣಿನ ಏರಿ (ಎಂಬ್ಯಾಕ್‍ಮೆಂಟ್‍) ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ನೀರಿನ ಬಸಿಯಿಂದ ಜಮೀನು ಉಳುಮೆ ಮಾಡಲು ಬಾರದಂತಾಗಿದೆ. ಕೆಲ ಕಡೆಗಳಲ್ಲಿ ಹೊಲಗಾಲುವೆಗಳನ್ನು ಅರ್ಧಕ್ಕೆ ಬಿಟ್ಟಿದ್ದರಿಂದ ಹೆಚ್ಚುವರಿ ನೀರು ಜಮೀನಿಗೆ ಹರಿಯುತ್ತಿದ್ದರೂ ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಸರ್ಜಾಪುರ ಸಮೀಪದ ಅಕ್ವಾಡೆಕ್ಟ್‌ನ ಎಂಬ್ಯಾಕ್‍ಮೆಂಟ್‍ ಬಳಿ ಭಾರಿ ಪ್ರಮಾಣದಲ್ಲಿ ಬಸಿ ನೀರು ಹರಿದು ಜಮೀನು ಪಾಳು ಬಿದ್ದಿದೆ. ಯರಡೋಣ ಬಳಿ ಹೊಲಗಾಲುವೆ ಅರ್ಧಕ್ಕೆ ಮೊಟಕುಗೊಳಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದು ಹೆಚ್ಚುವರಿ ನೀರು ಜಮೀನಿಗೆ ಹರಿದು ಬೆಳೆಗಳು ಹಾಳಾಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ರೈತರಾದ ಸದ್ಯೋಜಾತಪ್ಪ ಸಾಹುಕಾರ, ಏಕಅಮರಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಮಾಹಿತಿ ನೀಡಿದ್ದು ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗುವುದು. ಅನುದಾನ ಬಿಡುಗಡೆ ಮಾಡಿದ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.