ರಾಯಚೂರು: ತಾಲ್ಲೂಕಿನ ಬಿಜನಗೇರಾ ಗ್ರಾಮದ ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ನೇತೃತ್ವದಲ್ಲಿ ರೈತರು ಹಾಗೂ ಯುವಕರು ಮಂಗಳವಾರ ರ್ಯಾಲಿ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜೆಸ್ಕಾಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಯನ್ನು ಸರಿಪಡಿಸಬೇಕು. ಇದಕ್ಕಾಗಿ ಒಬ್ಬ ಲೈನ್ ಮೆನ್ ನೇಮಿಸಬೇಕು. ಗಾಳಿ, ಮಳೆ ಬಂದಾಗ ಹಾಗೂ ಇತರೆ ಸಂದರ್ಭದಲ್ಲಿ ಲೈನ್ನಲ್ಲಿ ತೊಂದರೆ ಉಂಟಾದಾಗ ತ್ವರಿತವಾಗಿ ದುರಸ್ತಿ ಮಾಡಬೇಕು ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೂಲಕ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಮನವಿ ಸಲ್ಲಿಸಿದರು.
ಆರ್ಕೆಎಸ್ ಜಿಲ್ಲಾ ಸಂಚಾಲಕ ರಾಮಣ್ಣ ಮರ್ಕಂದಿನ್ನಿ ಮಾತನಾಡಿ, ತಂತಿ ಹರಿದಾಗ, ಕಂಬ ಬಿದ್ದಾಗ ಹಾಗೂ ವಿದ್ಯುತ್ ಕಡಿತಗೊಂಡಾಗ ಎರಡ್ಮೂರು ದಿನಗಳಾದರೂ ಲೈನ್ ಮೈನ್ ದುರಸ್ತಿ ಮಾಡುವುದಿಲ್ಲ. ರೈತರು ತರಕಾರಿ ಹಾಗೂ ಇತರೆ ಬೆಳೆ ಬೆಳೆಯಲು ತೊಂದರೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರನ್ನು ಸಂಪರ್ಕಿಸಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ಮಾತನಾಡಿ, ಸಮಸ್ಯೆಗಳು ಪರಿಹಾರವಾಗಲು ಜನರು ಸಂಘಟಿತರಾಗಿ ಹೋರಾಡಬೇಕು. ಸಮಸ್ಯೆ ಪರಿಹಾರವಾಗದಿದ್ದಾಗ ಮುಂದಿನ ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.
ಹುಸೇನಪ್ಪ, ಮುರುಳಿ, ಬಡೇಸಾಬ್, ಹನುಮಂತ, ವೀರೇಶ, ರಮೇಶ, ಕೃಷ್ಟಪ್ಪ, ಆಂಜನೇಯ, ಪರಿಸೆಪ್ಪ, ವೆಂಕಟೇಶ, ಶ್ರೀನಿವಾಸ, ಸೋಮೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.