ADVERTISEMENT

ತುರ್ವಿಹಾಳ: ಭತ್ತ ಕಟಾವು ಯಂತ್ರಕ್ಕೆ ಭಾರಿ ಬೇಡಿಕೆ

ಬಾರದ ನೆರೆ ರಾಜ್ಯದ ಯಂತ್ರಗಳು: ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣ

ಮಲ್ಲೇಶ ಬಡಿಗೇರ
Published 3 ಡಿಸೆಂಬರ್ 2024, 5:24 IST
Last Updated 3 ಡಿಸೆಂಬರ್ 2024, 5:24 IST
ತುರ್ವಿಹಾಳ ಪಟ್ಟಣದ ಹೊಲದವೊಂದರಲ್ಲಿ ಭತ್ತ ಕಟಾವು ಮಾಡುತ್ತಿರುವ ಯಂತ್ರ 
ತುರ್ವಿಹಾಳ ಪಟ್ಟಣದ ಹೊಲದವೊಂದರಲ್ಲಿ ಭತ್ತ ಕಟಾವು ಮಾಡುತ್ತಿರುವ ಯಂತ್ರ    

ತುರ್ವಿಹಾಳ: ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಭತ್ತದ ಮೊದಲನೇ ಬೆಳೆ ಕಟಾವು ಮಾಡುವ ಹಂತಕ್ಕೆ ಬಂದಿದೆ. ಆದರೆ ಭತ್ತ ಕಟಾವು ಮಾಡುವ ಯಂತ್ರಗಳಿಂದಾಗಿ ರೈತರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಕಳೆದ ಮೂರು ದಿನಗಳಿಂದ ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಇನ್ನೂ ಕೆಲ ಕಡೆಗಳಲ್ಲಿ ತುಂತುರು ಮಳೆ ಬರುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲವೇನೋ ಎಂಬ ಆತಂಕ ಮೂಡಿದೆ.

ಪ್ರತಿ ವರ್ಷ ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿ ನೆರೆ ರಾಜ್ಯಗಳಿಂದ ಭತ್ತ ಕಟಾವು ಯಂತ್ರಗಳನ್ನು ಸ್ಥಳೀಯರು ಗುತ್ತಿಗೆ ಆಧಾರದಲ್ಲಿ ತರಸಿಕೊಳ್ಳುತ್ತಿದ್ದರು. ಇದರಿಂದ ರೈತರಿಗೆ ಅನುಕೂಲವಾಗುತ್ತಿತ್ತು.

ADVERTISEMENT

ಈ ವರ್ಷ ನೆರೆ ರಾಜ್ಯದ ಭತ್ತ ಕಟಾವು ಯಂತ್ರಗಳು ಬಂದಿಲ್ಲ. ಸ್ಥಳೀಯ ಯಂತ್ರಗಳಿಂದ ಕಟಾವು ಮಾಡಬೇಕಾದ ಅನಿವಾರ್ಯತೆ ಬಂದಿದೆ ಎಂದು ರೈತ ಶಿವಪುತ್ರಪ್ಪ ಕೆಂಗೇರಿ ಅಳಲು ತೋಡಿಕೊಂಡರು.

15 ದಿನಗಳ ಹಿಂದೆ ಅಕಾಲಿಕ ಮಳೆಯಿಂದಾಗಿ ಕಾಳು ತುಂಬಿ ಕಂಗೊಳಿಸುವಂತೆ ಬೆಳೆದು ನಿಂತಿದ್ದ ಭತ್ತದ ಬೆಳೆ ನೆಲಕ್ಕೆ ಬಿದ್ದಿದೆ. ಅದು ಕಟಾವಿಗೆ ಸಮಯ ತೆಗೆದುಕೊಳ್ಳುತ್ತಿದೆ. ಮೋಡ ಕವಿದ ವಾತಾವರಣ ಇರುವುದರಿಂದ ರೈತರಿಗೆ ತೊಂದರೆಯಾಗಿದೆ.

ಭತ್ತ ಕಟಾವು ಮಾಡಲು ಒಂದು ಗಂಟೆಗೆ ಸುಮಾರು ₹2,200 ರಿಂದ ₹2,400 ಕೊಡುತ್ತೇನೆ ಎಂದರೂ ಯಂತ್ರಗಳು ಸಿಗುತ್ತಿಲ್ಲ. ಒಂದು ವಾರ ಮುಂಚಿತವಾಗಿ ನಿಗದಿಪಡಿಸಬೇಕು ಎಂದು ತುರ್ವಿಹಾಳ ಪಟ್ಟಣದ ರೈತ ಸಿರಾಜ್ ಪಾಷಾ ದಳಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.