ADVERTISEMENT

ರಾಯಚೂರು: ರಿಮ್ಸ್‌ನಲ್ಲಿ ಪ್ರಥಮ ಬಾರಿಗೆ ವಿಶೇಷ ಶಸ್ತ್ರಚಿಕಿತ್ಸೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:20 IST
Last Updated 26 ಜುಲೈ 2025, 7:20 IST
ರಾಯಚೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ರಿಮ್ಸ್) ಬೋಧಕ ಆಸ್ಪತ್ರೆಯಲ್ಲಿ ವೈದ್ಯರು ಮಹಿಳೆಯೊಬ್ಬರ ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರ ಚಿಕಿತ್ಸೆ ಮಾಡಿದರು
ರಾಯಚೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ರಿಮ್ಸ್) ಬೋಧಕ ಆಸ್ಪತ್ರೆಯಲ್ಲಿ ವೈದ್ಯರು ಮಹಿಳೆಯೊಬ್ಬರ ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರ ಚಿಕಿತ್ಸೆ ಮಾಡಿದರು   

ರಾಯಚೂರು: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ರಿಮ್ಸ್) ಬೋಧಕ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ವೈದ್ಯರು ಮಹಿಳೆಯೊಬ್ಬರ ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ನಿತೀಶ್ ಕೆ. ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಪ್ರಥಮ ಬಾರಿಗೆ ನಡೆಸುತ್ತಿರುವ ಶಸ್ತ್ರಚಿಕಿತ್ಸೆ ವಿಧಾನಗಳನ್ನು ಖುದ್ದು ವೀಕ್ಷಣೆ ನಡೆಸಿದರು.

ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಆಗಮಿಸಿದ ಡಾ.ರಾಧಾ ಸಂಘವಿ ನೇತೃತ್ವದ ಸಹ ಪ್ರಾಧ್ಯಾಪಕಿ ಡಾ.ಅನುಜಾ ಸಗಮಕುಂಟಾ, ಅರವಳಿಕೆ ತಜ್ಞ ಡಾ.ಕಿರಣ ನಾಯಕ, ಡಾ.ಎಂ.ಕೆ. ಪಾಟೀಲ, ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಭಾರ ಮುಖ್ಯಸ್ಥ ಅನಿಲಕುಮಾರ, ಶುಶ್ರೂಷಕ ಅಧಿಕಾರಿ ಅನ್ನಪೂರ್ಣ, ಶಾಂಭವಿ, ಲಿಂಗರಾಜ್, ನಾರಾಯಣ ಅವರನ್ನೊಳಗೊಂಡ ತಂಡಕ್ಕೆ ಶುಭ ಕೋರಿದರು.

ADVERTISEMENT

ಆಸ್ಪತ್ರೆಯಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಇಂತಹ ಚಿಕಿತ್ಸೆಗಳನ್ನು ನಡೆಸಬೇಕು. ಬಡ ಹಾಗೂ ಸಾಮಾನ್ಯ ಕುಟುಂಬದವರಲ್ಲಿ ಆತ್ಮವಿಶ್ವಾಸ ತುಂಬುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಕೆಕೆಆರ್‌ಡಿಬಿ ಅನುದಾನದಲ್ಲಿ, ಉನ್ನತ ಮಟ್ಟದ ಉದರ ದರ್ಶಕ ಯಂತ್ರೋಪಕರಣದ ಮೂಲಕ ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರ ಚಿಕಿತ್ಸೆಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಸಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ ₹1 ಲಕ್ಷದಿಂದ ₹1.50 ಲಕ್ಷ ಖರ್ಚಾಗುತ್ತದೆ. ರಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಇಂತಹ ಸೇವೆಯನ್ನು ಪಡೆಯಬೇಕು. ಕನಿಷ್ಠ ₹10 ರಿಂದ ₹12 ಲಕ್ಷ ವೆಚ್ಚವಾಗುವ ವಾಕ್ ಲ್ಯಾಂಡ್ ಚಿಕಿತ್ಸೆಯು ರಿಮ್ಸ್ ಆಸ್ಪತ್ರೆಯ ವಾಕ್ ಶ್ರಾವಣ ವಿಭಾಗದಲ್ಲಿ ಉಚಿತವಾಗಿ ಸಿಗಲಿದೆ. ಕಣ್ಣಿನ ವಿಭಾಗದಲ್ಲಿ ನಿರಂತರವಾಗಿ ಕಣ್ಣಿನ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಡಾ.ಬಿ.ಎಚ್.ರಮೇಶ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ ನವಸುಂಡಿ, ರಿಮ್ಸ್ ಸಂಸ್ಥೆಯ ಔಷಧ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರರಾವ್ ಉಪಸ್ಥಿತರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.