
ಮಸ್ಕಿ: ಬಸ್ ನಿಲ್ದಾಣದ ಸಮೀಪದ ಜೆಸ್ಕಾಂ ಹಾಗೂ ಸುತ್ತಲಿನ ಮನೆಗಳ ಚರಂಡಿ ಹಾಗೂ ಶೌಚದ ನೀರು ಹೊರಗೆ ಹರಿದು ಹೋಗಲಾಗದೇ, ಬಸ್ ನಿಲ್ದಾಣದಲ್ಲಿಯೇ ಸಂಗ್ರಹಗೊಂಡಿದ್ದು, ದುರ್ನಾತ ಬೀರುತ್ತಿದೆ. ಇದರಿಂದಾಗಿ ಪ್ರಯಾಣಿಕರು, ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ನೈರ್ಮಲ್ಯದ ಕೊರತೆಯೂ ಇದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ಚರಂಡಿಗಳು ಕಟ್ಟಿಕೊಂಡಿದ್ದು, ಕೊಳಚೆ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಸ್ಥಳದಲ್ಲಿರುವ ಆಹಾರ ಮಳಿಗೆಯವರೂ ತೊಂದರೆ ಅನುಭವಿಸುವಂತಾಗಿದೆ.
ಪ್ರಯಾಣಿಕರು ಹಾಗೂ ಸ್ಥಳೀಯರು ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಪಕ್ಕದ ಜೆಸ್ಕಾಂ ಕಚೇರಿಯಿಂದ ಬರುವ ನೀರು ತಡೆಗಟ್ಟವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ, ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಚರಂಡಿ, ಶೌಚಾಲಯ ದುರಸ್ತಿಗೆ ಮುಂದಾಗಬೇಕು ಹಾಗೂ ಬಸ್ ನಿಲ್ದಾಣದ ಒಳಗೆ ಬರುವ ಶೌಚಾಲಯ ಹಾಗೂ ಚರಂಡಿ ನೀರು ಬರುವುದನ್ನು ತಡೆಯುವ ಜೊತೆಗೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ನಿಲ್ದಾಣದ ಪರಿಸರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
Quote - ಜೆಸ್ಕಾಂನಿಂದ ಬಸ್ ನಿಲ್ದಾಣದ ಒಳಗೆ ಹರಿದು ಬರುವ ಶೌಚ ಹಾಗೂ ಚರಂಡಿ ನೀರು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಪುರಸಭೆಗೆ ಹಲವಾರು ಬಾರಿ ಪತ್ರ ಬರೆಯಲಾಗಿದೆ. ಈವರೆಗೆ ಕ್ರಮಕೈಗೊಂಡಿಲ್ಲ ಆದಪ್ಪ ಕುಂಬಾರ ವ್ಯವಸ್ಥಾಪಕ ಕಲ್ಯಾಣ ಸಾರಿಗೆ ಡಿಪೋ ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.