
ಮಸ್ಕಿ: ಹೊಸ ತಾಲ್ಲೂಕು ಘೋಷಣೆಯಾಗಿ 10 ವರ್ಷಗಳೇ ಕಳೆದರೂ ಆಡಳಿತಾತ್ಮಕ ಮೂಲಸೌಕರ್ಯ ಸಂಪೂರ್ಣ ಕಾರ್ಯಾರಂಭವಾಗದ ಕಾರಣ ಜನ ಇನ್ನೂ ಹಳೆಯ ತಾಲ್ಲೂಕುಗಳನ್ನೇ ಅವಲಂಬಿಸಿದ್ದಾರೆ.
ಸುತ್ತಮುತ್ತಲಿನ ಸುಮಾರು 180ಕ್ಕೂ ಹೆಚ್ಚು ಹಳ್ಳಿಗಳು, 20ಕ್ಕೂ ಹೆಚ್ಚು ತಾಂಡಾ–ದೊಡ್ಡಿಗಳನ್ನು ಒಳಗೊಂಡ ಹೊಸ ತಾಲ್ಲೂಕು ಕೇಂದ್ರವಾಗಿ ಘೋಷಿತವಾದ ಮಸ್ಕಿಗೆ ಪೂರ್ಣ ಪ್ರಮಾಣದ ಆಡಳಿತ ಕಚೇರಿಗಳ ಆರಂಭವಾಗದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಈ ತಾಲ್ಲೂಕು ರಚನೆಗೆ ಮೊದಲು ಪ್ರದೇಶವು ಸಿಂಧನೂರು, ಲಿಂಗಸುಗೂರು ಹಾಗೂ ಮಾನ್ವಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸೇರಿತ್ತು. 2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲ್ಲೂಕು ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. ಆದರೆ, ಅದಾದ ಬಳಿಕ ಆಡಳಿತಾತ್ಮಕ ವಿಸ್ತರಣೆ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ ಎನ್ನುವುದು ಜನರ ದೂರಾಗಿದೆ.
ಪ್ರಸ್ತುತ ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ, ಜೆಸ್ಕಾಂ ಹಾಗೂ ಖಜಾನೆ ಕಚೇರಿ ಹೊರತುಪಡಿಸಿ ತಾಲ್ಲೂಕಿಗೆ ಬೇಕಾದ ಉಪ ನೋಂದಣಿ ಕಚೇರಿ ಸೇರಿ ಇನ್ನೂ 28ಕ್ಕೂ ಹೆಚ್ಚು ಇಲಾಖೆಗಳ ಕಚೇರಿಗಳು ಕಾರ್ಯಾರಂಭವಾಗಬೇಕಿದೆ. ವಿವಿಧ ಪ್ರಮಾಣಪತ್ರಗಳು, ಸರ್ಕಾರಿ ಸೇವೆಗಳು ಹಾಗೂ ಆಡಳಿತಾತ್ಮಕ ಕೆಲಸಗಳಿಗಾಗಿ ಜನರು ಹಳೆಯ ತಾಲ್ಲೂಕುಗಳಿಗೆ ತೆರಳಬೇಕಾದ ಪರಿಸ್ಥಿತಿ ಮುಂದುವರಿದಿದೆ.
ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕನಸು ಕನಸಾಗಿಯೇ ಉಳಿದಿದೆ. ಐದು ಹಾಸಿಗೆಗಳಲ್ಲೇ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕು ಕೇಂದ್ರವಾಗಿದ್ದರೂ ಆರೋಗ್ಯ ಹಾಗೂ ಆಡಳಿತ ಸೇವೆಗಳ ಕೊರತೆ ಜನಜೀವನಕ್ಕೆ ಅಡ್ಡಿಯಾಗುತ್ತಿದೆ. ಸರ್ಕಾರಿ ನೌಕರರು ವಿವಿಧ ತಾಲ್ಲೂಕುಗಳ ನಡುವೆ ಸಂಚಾರ ಮಾಡಬೇಕಾಗಿದೆ. ಸೇವಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ.
ಕ್ಷೇತ್ರದ ಶಾಸಕರಿಗೂ ಮೂರು ತಾಲ್ಲೂಕುಗಳ ಅಧಿಕಾರಿಗಳ ಸಮನ್ವಯ ಸಾಧಿಸುವುದು ಸವಾಲಾಗಿದೆ. ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮೂರು ತಾಲ್ಲೂಕುಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ದಿನಗಟ್ಟಲೇ ಸಭೆ ಮಾಡಬೇಕಾಗಿದೆ. ಇದು ಅಭಿವೃದ್ಧಿ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಉತ್ತಮ ನಿದರ್ಶನವಾಗಿದೆ.
ತಾಲ್ಲೂಕು ಘೋಷಣೆಯ ಉದ್ದೇಶ ಜನರಿಗೆ ಉತ್ತಮ ಆಡಳಿತ ಸೌಲಭ್ಯ ಒದಗಿಸುವುದಾಗಿದೆ. ಆದರೆ, ಮೂಲಸೌಕರ್ಯಗಳ ವಿಳಂಬದಿಂದ ಉತ್ತಮ ಸೇವೆಯ ಗುರಿ ಸಾಧನೆ ಸಾಧ್ಯವಾಗಿಲ್ಲ. ಸಮಸ್ಯೆಗಳೇ ಅಧಿಕವಾಗಿವೆ.
ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಸರ್ಕಾರಿ ಕಚೇರಿ ಆರಂಭಿಸಲು ಅಗತ್ಯ ಅನುದಾನ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆಆರ್. ಬಸನಗೌಡ ತುರ್ವಿಹಾಳ ಶಾಸಕ
ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಹೊಸ ತಾಲ್ಲೂಕು ಘೋಷಣೆ ಮಾಡಿದೆ. ಆದರೆ ಪೂರ್ಣ ಪ್ರಮಾಣದ ಕಚೇರಿಗಳು ಆರಂಭವಾಗದ ಕಾರಣ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆಪ್ರತಾಪಗೌಡ ಪಾಟೀಲ ಮಾಜಿ ಶಾಸಕ
ತಾಲ್ಲೂಕಿನಲ್ಲಿ ಪೂರ್ಣ ಪ್ರಮಾಣದ ಕಚೇರಿ ಆರಂಭವಾಗದ ಕಾರಣ ಅಧಿಕಾರಿಗಳು ಅದರಲ್ಲೂ ಶಾಲೆ ಕಾಲೇಜುಗಳು ಶಿಕ್ಷಕರು ಇನ್ನೂ ಮೂಲ ತಾಲ್ಲೂಕಿಗೆ ಅಲೆದಾಡಬೇಕಾಗಿದೆಶಿವಕುಮಾರ ಎನ್. ಅಧ್ಯಕ್ಷ ತಾಲ್ಲೂಕು ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮಸ್ಕಿ
‘ಕೆಎಸ್ಆರ್ಪಿ ಘಟಕ ಸ್ಥಾಪನೆಗೆ ಮನವಿ’
ಮಸ್ಕಿ ತಾಲ್ಲೂಕಿಗೆ ಪೂರ್ಣಪ್ರಮಾಣದ ಕಚೇರಿಗಳ ಆರಂಭಕ್ಕೆ ಬಜೆಟ್ನಲ್ಲಿ ಹಣ ಮೀಸಲಿಡಬೇಕು. ಈಗಿನ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಸಂಚಾರಿ ನ್ಯಾಯಪೀಠವನ್ನು ಕಾಯಂ ಪೀಠವನ್ನಾಗಿಸಬೇಕು ನನ್ನ ಕ್ಷೇತ್ರದ ವಟಗಲ್ ಬಳಿ ಉದ್ದೇಶಿತ ಕೆಎಸ್ಆರ್ಪಿ ಘಟಕ ಸ್ಥಾಪನೆ ಹಾಗೂ ಮಸ್ಕಿ ಪಟ್ಟಣದಲ್ಲಿ ಸರ್ಕಾರಿ ಉಪಕರಣಾಗಾರ ತರಬೇತಿ ಕೇಂದ್ರ (ಜಿಟಿಜಿಸಿ) ಸ್ಥಾಪನೆಗೆ ಬಜೆಟ್ನಲ್ಲಿ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಮಸ್ಕಿ ಶಾಸಕರೂ ಆದ ಅಧ್ಯಕ್ಷ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳುತ್ತಾರೆ.
ನಾಲ್ಕೇ ಕಚೇರಿ ಆರಂಭ
ನಾಲ್ಕು ದಶಕಗಳ ಹೋರಾಟದ ಫಲವಾಗಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಜಗದೀಶ ಶೆಟ್ಟರ್ ಮಸ್ಕಿಯನ್ನು ನೂತನ ತಾಲ್ಲೂಕು ಘೋಷಣೆ ಮಾಡಿದ್ದರು. ಆದರೆ ಅದು ಅಧಿಕೃತವಾಗಿ ಉದ್ಘಾಟನೆ ಆಗಲಿಲ್ಲ 2014ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಸ್ಕಿಗೆ ಆಗಮಿಸಿ ನೂತನ ತಾಲ್ಲೂಕು ಘೋಷಣೆ ಮಾಡಿ ಹೋಗಿದ್ದರು. ಮಸ್ಕಿಯಲ್ಲಿ ನಾಲ್ಕು ಕಚೇರಿಗಳು ಮಾತ್ರ ಕಾರ್ಯಾರಂಭ ಮಾಡಿವೆ. ತಾಲ್ಲೂಕಿಗೆ ಅವಶ್ಯಕತೆ ಇರುವ 28ಕ್ಕೂ ಹೆಚ್ಚು ಇಲಾಖೆಗಳ ಕಚೇರಿಗಳು ಇಲ್ಲಿ ಕಾರ್ಯಾರಂಭ ಮಾಡಿಲ್ಲ. ತಾಲ್ಲೂಕು ಕೇಂದ್ರ ಉದ್ಘಾಟಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪೂರ್ಣ ಪ್ರಮಾಣದ ಕಚೇರಿಗಳನ್ನು ಆರಂಭಿಸಲು ಬಜೆಟ್ನಲ್ಲಿ ಅವಕಾಶ ಮಾಡುವರೇ ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.