ADVERTISEMENT

ರಾಯಚೂರು | ಶುಭ ಶುಕ್ರವಾರ: ವಿಶೇಷ ಪ್ರಾರ್ಥನೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:56 IST
Last Updated 29 ಮಾರ್ಚ್ 2024, 15:56 IST
ರಾಯಚೂರಿನ ಸೇಂಟ್‌ ಮೇರಿ ಚರ್ಚ್‌ನಲ್ಲಿ ಶುಭ ಶುಕ್ರವಾರದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು
ರಾಯಚೂರಿನ ಸೇಂಟ್‌ ಮೇರಿ ಚರ್ಚ್‌ನಲ್ಲಿ ಶುಭ ಶುಕ್ರವಾರದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು   

ರಾಯಚೂರು: ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರು ಶುಭ ಶುಕ್ರವಾರವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಿದರು.

ಚರ್ಚ್ ಆವರಣದಲ್ಲಿ ಶಿಲುಬೆಯನ್ನು ಹಿಡಿದು ಮೆರವಣಿಗೆ ನಡೆಸಿದರು. ಏಸು ಕ್ರಿಸ್ತರ ಬದುಕಿನ ಕೊನೆಯ ಅವಧಿಯಲ್ಲಿ ನಡೆದ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದಂತೆ ‘ಶಿಲುಬೆಯ ಹಾದಿ ’ ಸ್ಮರಿಸಿ ಆಚರಣೆ ಮಾಡಲಾಯಿತು. ಏಸು ಕ್ರಿಸ್ತರು ಅನುಭವಿಸಿದ ಕಷ್ಟ- ಸಂಕಷ್ಟಗಳ ಸ್ಮರಣೆ ಮಾಡಿದರು. ಇದೇ ಸಂದರ್ಭ ಧ್ಯಾನ, ಶಿಲುಬೆಯ ಆರಾಧನೆ, ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಶುಭ ಶುಕ್ರವಾರ ಕಾರಣ ಚರ್ಚ್‌ಗಳಲ್ಲಿ ಘಂಟೆ ನಾದ ಹಾಗೂ ಬಲಿ ಪೂಜೆಯೂ ಇರಲಿಲ್ಲ. ಅತ್ಯಂತ ಭಕ್ತಿಯಿಂದ ನಿಶ್ಯಬ್ದ ಪರಿಸರದಲ್ಲಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು. ಧ್ಯಾನ ಹಾಗೂ ಉಪವಾಸದಲ್ಲಿ ದಿನ ಕಳೆದರು.

ರಾಯಚೂರಿನ ಮೆಥೊಡಿಸ್ಟ್ ಸೆಂಟ್ರಲ್ ಚರ್ಚ್, ಟ್ರಿನಿಟ್ ಮೆಥೊಡಿಸ್ಟ್ ಚರ್ಚ್, ಬುಡಿವಾಲ್ ಕ್ಯಾಂಪ್ ಚರ್ಚ್, ರಾಮರಹೀಂ ಕಾಲೊನಿಯ ಇಮಾನುವೆಲ್ ಮೆಥೊಡಿಸ್ಟ್ ಚರ್ಚ್, ದಿಡ್ಡಿಗೆ ಸೇಂಟ್ ತೆರೆಸಾ ಚರ್ಚ್, ಸ್ಟೇಷನ್‌ ರಸ್ತೆಯಲ್ಲಿರುವ ಸೇಂಟ್‌ ಫ್ರಾನ್ಸಿಸ್ ಝೇವಿರ್‌ ಚರ್ಚ್‌, ಆಶಾಪುರ ರಸ್ತೆಯಲ್ಲಿರುವ ಅಗಪೇ ಅಗ್ ಚರ್ಚ್‌ಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.