
ಕವಿತಾಳ: ಚಿಣ್ಣರೊಂದಿಗೆ ಹಾಡಿ ಕುಣಿದು ಸಂಭ್ರಮಿಸಿದ ತರಬೇತಿ ನಿರತ ಐಎಎಸ್ ಅಧಿಕಾರಿಗಳು ಮಕ್ಕಳಿಗೆ ಚಾಕೊಲೇಟ್ ಮತ್ತು ಬಿಸ್ಕತ್ ನೀಡಿ ಖುಷಿ ಪಟ್ಟರು.
ಉತ್ತಾರಖಂಡದ ಮಸ್ಸೂರಿಯ ಐಎಎಸ್ ತರಬೇತಿ ಅಕಾಡೆಮಿಯಿಂದ ಆಗಮಿಸಿದ ತರಬೇತಿ ನಿರತ ಅಧಿಕಾರಿಗಳು ಎರಡು ದಿನಗಳಿಂದ ಸಮೀಪದ ತೋರಣದಿನ್ನಿ, ಮಲ್ಲದಗುಡ್ಡ ವ್ಯಾಪ್ತಿಯಲ್ಲಿ ಆಸ್ಪತ್ರೆ, ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗಳು ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಮಾಹಿತಿ ಪಡೆದರು.
ತೋರಣದಿನ್ನಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಅಧಿಕಾರಿಗಳ ತಂಡವನ್ನು ಅಲ್ಲಿನ ಮಕ್ಕಳು ಹಾಡು ನೃತ್ಯದ ಮೂಲಕ ಸ್ವಾಗತಿಸಿದರು, ನಗು ನಗುತ್ತಲೇ ಚಿಣ್ಣರೊಂದಿಗೆ ಬೆರೆತ ಅಧಿಕಾರಿಗಳು ಮಕ್ಕಳೊಂದಿಗೆ ತಾವೂ ಹೆಜ್ಜೆ ಹಾಕಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಸಸಿ ನೆಟ್ಟುರು. ಗ್ರಾಮೀಣ ಆರ್ಥಿಕತೆ, ಕಿರು ಉದ್ಯಮ, ಕುಟುಂಬ ನಿರ್ವಹಣೆ ಕುರಿತು ಗ್ರಾಮದ ಸ್ವ ಸಹಾಯ ಗುಂಪಿನ ಸದಸ್ಯರೊಂದಿಗೆ ಚರ್ಚಿಸಿದರು.
ಭತ್ತದ ಬೆಳೆ, ನೀರಿನ ಬಳಕೆ, ಕ್ರಿಮಿನಾಶಕ, ರಸಗೊಬ್ಬರ ಬಳಕೆ, ಇಳುವರಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ರೈತರಿಂದ ಮಾಹಿತಿ ಪಡೆದರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಸಿಡಿಪಿಒ ಎಂ.ಡಿ.ಗೋಕುಲ್ ಹುಸೇನ್, ಮಸ್ಕಿ ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ ಮತ್ತು ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.