
ರಾಯಚೂರು: ‘ಸಮಗ್ರ ಕೃಷಿ ಮೂಲಕವೇ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಅಭಿಪ್ರಾಯಪಟ್ಟರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾರಾಮುಲ್ಲಾದ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಸಹಕಾರಿ ನಿಯಮಿತದ ಸಹಯೋಗದಲ್ಲಿ ನಡೆದ ಮೂರು ದಿನಗಳ ಅವಧಿಯ ಕೃಷಿ, ಪಶುವೈದ್ಯಕೀಯ ಮತ್ತು ಕೃಷಿಗೆ ಸಂಬಂಧಿಸಿದ ವಿಷಯಗಳಲ್ಲಿ ಸುಸ್ಥಿರ ನಾವಿನ್ಯತೆಗಳ ಕುರಿತ ಅಂತರ ರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಸಮ್ಮೇಳನಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಜ್ಞಾನ ಮತ್ತು ಕೌಶಲ ವಿನಿಮಯ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿವೆ. ವಿದ್ಯಾರ್ಥಿಗಳು ಇಂತಹ ಸಮ್ಮೇಳನಗಳಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಹೇಳಿದರು.
‘ಇಂದಿನ ವಿದ್ಯಾರ್ಥಿಗಳು ಕೃಷಿ ಶಿಕ್ಷಣವನ್ನು ಪರಿಪೂರ್ಣತೆಯಿಂದ ಪಡೆದು ಉತ್ತಮ ಉದ್ಯಮಿಗಳಾಗಬೇಕು. ಹತ್ತಾರು ಜನಕ್ಕೆ ಉದ್ಯೋಗ ಕೊಡುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮ್ಮೇಳನದ ಸಂಯೋಜಕ ಬಾರಾಮುಲ್ಲಾ ಡಾ.ಆರ್.ಎ. ಶಾಹ ಮಾತನಾಡಿ, ‘ಇಂತಹ ಸಮ್ಮೇಳನಗಳು ಜ್ಞಾನಾರ್ಜನೆ, ಮತ್ತು ಕೌಶಲ್ಯಭಿವೃದ್ಧಿಗೆ ಪೂರಕವಾಗಿವೆ‘ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಗುರುರಾಜ ಸುಂಕದ ಹಾಗೂ ಸಮ್ಮೇಳನದ ಸಂಘಟಕರಾದ ಜಾಗೃತಿ ದೇಶಮಾನ್ಯ ಮಾತನಾಡಿದರು.
ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಿ.ಬಿ. ಲೋಕೇಶ ಅವರು ಮೂರು ದಿನಗಳ ಅವಧಿಯ ಸಮ್ಮೇಳನದ ವರದಿಯನ್ನು ಮಂಡಿಸಿದರು. ಸಹ ಪ್ರಾಧ್ಯಾಪಕ ಸುರೇಶ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.