ರಾಯಚೂರು: ಸಾರಿಗೆ ನೌಕರರು ಎದುರಿಸುತ್ತಿರುವ ಕಿರುಕುಳ ತಪ್ಪಿಸಿ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿ ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ನಿಂದ ರಾಜ್ಯದೆಲ್ಲೆಡೆ ಮೇ 28ರಂದು ಧರಣಿ ನಡೆಸಲಾಗುತ್ತಿದೆ ಎಂದು ಸಂಘಟನೆಯ ಕಾರ್ಯದರ್ಶಿ ಶ್ರೀಶೈಲರೆಡ್ಡಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯಲ್ಲಿ ಚಾಲಕರು ಹಾಗೂ ನಿರ್ವಾಹಕರಿಗೆ ಕೆಲಸ ಭಾರ ಹಾಕಲಾಗುತ್ತಿದ್ದು, ನೌಕರರಿಗೆ ವಿಚಿತ್ರವಾದ ಕಿರುಕುಳ ನೀಡಲಾಗುತ್ತದೆ. ಆಕಸ್ಮಿಕ ಅಪಘಾತಗಳು ಸಂಘವಿಸಿದಾಗ ಹೆಚ್ಚುವರಿ ದಂಡ ವಿಧಿಸಲಾಗುತ್ತಿದೆ ಎಂದು ದೂರಿದರು.
ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಮಾರ್ಗದ ಬಸ್ ನೀಡದೇ ಸತಾಯಿಸಲಾಗುತ್ತಿದ್ದು, ಸೇವೆಗೆ ಬಂದರೂ ರಜೆಯೆಂದು ಪರಿಗಣಿಸಲಾಗುತ್ತಿದೆ. ಸೌಲಭ್ಯಗಳಿಂದ ವಂಚಿಸಲಾಗುತ್ತಿದ್ದು, ಬಸ್ ನಿರ್ವಾಹಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ವರ್ಗಾವಣೆ ಮತ್ತು ಚಾರ್ಜ್ಶೀಟ್ ಹಾಕಲಾಗುತ್ತಿದೆ. ಕೆಲಸ ಮಾಡಿದರೂ ಸಿಬ್ಬಂದಿ ಕಿರುಕುಳ ಅನುಭವಿಸಬೇಕಾಗಿದೆ ಎಂದರು.
ಮಾನವೀಯತೆ ಇಲ್ಲದೇ ವರ್ತಿಸಲಾಗುತ್ತಿದ್ದು, ಈ ಹಿಂದೆ 8ರ ಅನುಪಾತದಲ್ಲಿದ್ದ ನೌಕರರ ಸಂಖ್ಯೆ ಈಗ 4ಕ್ಕೆ ಕುಸಿದಿದೆ. ವೈದ್ಯಕೀಯ ಸೌಲಭ್ಯಗಳನ್ನು ನೀಡದೇ ನೌಕರರಿಗೆ ಹಿಂಸೆ ನೀಡಲಾಗುತ್ತಿದೆ. ಇಎಸ್ಐ ಸೌಲಭ್ಯ ಕಡಿತಗೊಳಿಸಿ ರೆಫರಲ್ ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಆಡಳಿತ ವರ್ಗ ನೌಕರರ ಸಮಸ್ಯೆಗಳನ್ನು ಗಮನಿಸುತ್ತಿಲ್ಲ. ಕಾರ್ಮಿಕ ಸಂಘಟನೆಗಳಿಗೂ ಮಾನ್ಯತೆ ನೀಡದೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಆರೋಪಿಸಿದರು.
ಚಾಲಕರು ಹಾಗೂ ನಿರ್ವಾಹಕರು ನಿರಂತರವಾಗಿ ಶೋಷಣೆ ಅನುಭವಿಸುತ್ತಿದ್ದಾರೆ. ಆದ್ದರಿಂದ ನಾಲ್ಕು ನಿಗಮಗಳನ್ನು ಒಂದುಗೂಡಿಸುವುದು, ಖಾಸಗಿ ವಾಹನಗಳ ನಿಯಂತ್ರಣಕ್ಕೆ ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಭಾಗೀಯ ಕಚೇರಿಯ ಎದುರು ಧರಣಿ ಮಾಡಲಾಗುತ್ತದೆ. ಜೂನ್ 27ರಂದು ಬೆಂಗಳೂರು ಚಳವಳಿ ನಡೆಸಲಾಗುತ್ತದೆ ಎಂದರು.
ಎಸ್.ಎಂ.ಪೀರ, ರಂಗಣ್ಣ, ಗಿರಿ, ಗೋವಿಂದ, ವೆಂಕಟೇಶ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.