ADVERTISEMENT

ಕೆರೆ ಮಣ್ಣಿನಿಂದ ಫಲವತ್ತತೆ ಹೆಚ್ಚಳ: ಜಿಲ್ಲಾಧಿಕಾರಿ ಶರತ್‌ ಬಿ.

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:39 IST
Last Updated 1 ಮೇ 2019, 14:39 IST
ರಾಯಚೂರು ತಾಲ್ಲೂಕಿನ ಕಟ್ಲಟಕೂರ್ ಕೆರೆಯಲ್ಲಿ ಪ್ರಗತಿಯಲ್ಲಿರುವ ಹೂಳೆತ್ತುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಶರತ್‌ ಬಿ. ಬುಧವಾರ ಪರಿಶೀಲಿಸಿದರು
ರಾಯಚೂರು ತಾಲ್ಲೂಕಿನ ಕಟ್ಲಟಕೂರ್ ಕೆರೆಯಲ್ಲಿ ಪ್ರಗತಿಯಲ್ಲಿರುವ ಹೂಳೆತ್ತುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಶರತ್‌ ಬಿ. ಬುಧವಾರ ಪರಿಶೀಲಿಸಿದರು   

ರಾಯಚೂರು: ಕೆರೆಯ ಹೂಳನ್ನು ರೈತರು ತಮ್ಮ ಜಮೀನಿಗೆ ಸಾಗಿಸಿಕೊಂಡಲ್ಲಿ ಜಮೀನಿನ ಫಲವತ್ತತೆ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು.

ಜಿಲ್ಲಾಡಳಿತ ಹಾಗೂ ಭಾರತೀಯ ಜೈನ ಸಂಘ (ಜಿಜೆಎಸ್)ದಿಂದ ತಾಲ್ಲೂಕಿನ ಕಟ್ಲಟಕೂರ್ ಗ್ರಾಮದಲ್ಲಿ ಆರಂಭಿಸಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಮಾತನಾಡಿದರು.

ರೈತರು ಅಗತ್ಯ ಪ್ರಮಾಣದ ಹೂಳನ್ನು ತಮ್ಮ ಜಮೀನಿಗೆ ಕೊಂಡೊಯ್ಯಬೇಕು. ಕೆರೆಯ ಅಂಚನ್ನು ಮತ್ತಷ್ಟು ಭದ್ರ ಪಡಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.

ADVERTISEMENT

ಬಿದ್ದ ಮಳೆ ನೀರು ಕೆರೆಗೆ ಹರಿದು ಬರಲು ಅನುಕೂಲವಾಗುವಂತೆ ಕಾಲುವೆಗಳನ್ನು ಮತ್ತಷ್ಟು ಅಗಲ ಮಾಡುವಂತೆ ಸೂಚಿಸಿದರು.

236.48 ಎಕರೆ ವ್ಯಾಪ್ತಿಯಲ್ಲಿರುವ ಕಟ್ಲಟ್‌ಕೂರ್ ಕೆರೆಯಲ್ಲಿ ಹೂಳು ತುಂಬಿತ್ತು. ಹೂಳು ತೆಗೆಯುವ ಮುನ್ನ ಕೆರೆ ಅಂಗಳದಲ್ಲಿ ಬೆಳೆದಿದ್ದ ಪೊಟರೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಇದುವರೆಗೆ 2.75 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು ಹೊರ ತೆಗೆದು ರೈತರ ಜಮೀನುಗಳಿಗೆ ಸಾಗಿಸಲಾಗಿದೆ. ಪ್ರತಿದಿನ 4 ಹಿಟಾಚಿ ಹಾಗೂ 3 ಜೆಸಿಬಿ ಯಂತ್ರಗಳನ್ನು ಬಳಸಿ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ. ತಾಂತ್ರಿಕ ತಂಡದಿಂದ ಕೆರೆ ಸಮೀಕ್ಷೆ ಕೈಗೊಂಡ ನಂತರ ಕೆರೆಯ ಆವರಣ, ಕೆರೆಯ ಸಮತಟ್ಟು ಇನ್ನಿತರೆ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ನಲಿನ್ ಅತುಲ್ ಕೂಡಾ ಹೂಳು ಹೊರತೆಗೆಯುವ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

ರೈತರು ಸ್ವಯಂ ಪ್ರೇರಿತರಾಗಿ ಟ್ರಾಕ್ಟರ್‌ಗಳ ಮೂಲಕ ತಮ್ಮ ಜಮೀನುಗಳಿಗೆ ಸಾಗಿಸುತ್ತಿರುವ ದೃಶ್ಯ ಕಂಡು ಬಂತು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ಸಹಾಯಕ ನಿರ್ದೇಶಕ ಸಂದೀಪ್, ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಘಟನಾಧಿಕಾರಿ ಕಮಲ್ ಕುಮಾರ್, ಅಜಿತ್ ರಾಜ್ ಸಂಚಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.