ಲಿಂಗಸುಗೂರು: ‘ಸಿಂಧನೂರಿಗೆ ಜಿಲ್ಲಾಸ್ಪತ್ರೆ ಸ್ಥಳಾಂತರ ವಿರೋಧಿಸಿ ಜೂನ್ 3ರಂದು ಲಿಂಗಸುಗೂರು ಬಂದ್ಗೆ ಕರೆ ನೀಡಲಾಗಿದೆ. ತಾಲ್ಲೂಕಿನ ಎಲ್ಲಾ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು’ ಎಂದು ಶಾಸಕ ಮಾನಪ್ಪ ವಜ್ಜಲ್ ಮನವಿ ಮಾಡಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,‘200 ಹಾಸಿಗೆ ಸಾಮರ್ಥ್ಯದ ಜಿಲ್ಲಾಮಟ್ಟದ ಆಸ್ಪತ್ರೆ ಸಿಂಧನೂರಿಗೆ ಸ್ಥಳಾಂತರ ಮಾಡಿ ಕಾಂಗ್ರೆಸ್ ಸರ್ಕಾರ ನಮ್ಮ ತಾಲ್ಲೂಕಿಗೆ ಮೋಸ ಮಾಡಿದೆ’ ಎಂದು ದೂರಿದರು.
‘ಲಿಂಗಸುಗೂರಿಗೆ ಆಸ್ಪತ್ರೆ ಕೊಟ್ಟಿದ್ದನ್ನು ಸಿಂಧನೂರು ಶಾಸಕರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಿ ಹಿಂಬಾಗಿಲಿನಿಂದ ಕಸಿದುಕೊಂಡು ಹೋಗಿದ್ದಾರೆ. ನಮ್ಮಲ್ಲಿ ಜಿಲ್ಲಾಸ್ಪತ್ರೆ ಕಟ್ಟಲು 6 ಎಕರೆ ಭೂಮಿ ಇದ್ದರೂ ಯಾವುದೇ ಕಾರಣ ಇಲ್ಲದೆ ರಾತ್ರೋರಾತ್ರಿ ಸ್ಥಳಾಂತರ ಮಾಡಿದ್ದು ನೀಚ ಕೆಲಸವಾಗಿದೆ. ಸರ್ಕಾರದ ಕ್ರಮ ಸಹಿಸುವುದಿಲ್ಲ. ಇದಕ್ಕಾಗಿ ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡುತ್ತೇನೆ. ಅತಿ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಬಳಿಗೆ ನಿಯೋಗ ಕರೆದುಕೊಂಡು ಹೋಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ’ ಎಂದರು.
‘ಜಿಲ್ಲಾಸ್ಪತ್ರೆಯನ್ನು ಮರಳಿ ಲಿಂಗಸುಗೂರಿಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಲಿಂಗಸುಗೂರು ಅಭಿವೃದ್ಧಿ ಹೋರಾಟ ಸಮಿತಿಯ ಜೊತೆಗೊಡಿ ಜೂನ್ 3ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಲಿಂಗಸುಗೂರು ಬಂದ್ಗೆ ಕರೆ ನೀಡಲಾಗಿದೆ’ ಎಂದು ಹೇಳಿದರು.
‘ಪಟ್ಟಣದಲ್ಲಿ ಶಾಲಾ–ಕಾಲೇಜು, ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ವರ್ತಕರು ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಬೇಕು. ತಾಲ್ಲೂಕಿನ ಜನರ ಆರೋಗ್ಯದ ಹಿತದೃಷ್ಟಿಯಿಂದಾಗಿ ಕಾಂಗ್ರೆಸ್ ಮುಖಂಡರು ಭಾಗವಹಿಸಬೇಕು’ ಎಂದರು.
ಉಪನ್ಯಾಸಕ ಮಂಜುನಾಥ ಕಾಮಿನ್, ಹಿರಿಯ ವಕೀಲ ಸಿ.ಸಿ.ಕರಡಕಲ್ ಮಾತನಾಡಿದರು.
ಅಮರೇಶಪ್ಪ ಹೂನೂರು, ಗಿರಿಮಲ್ಲನಗೌಡ ಪಾಟೀಲ, ಭೂಪನಗೌಡ ಪಾಟೀಲ, ಜಿ.ವಿ ಕೆಂಚನಗುಡ್ಡ, ಕುಪ್ಪಣ್ಣ ಕೊಡ್ಲಿ, ಪ್ರಭುಸ್ವಾಮಿ ಅತ್ತನೂರು, ಪ್ರಭುಲಿಂಗ ಮೇಗಳಮನಿ, ಸುಧೀರ್ ಶ್ರೀವಾಸ್ತವ, ಸತ್ಯನಾರಾಯಣ ಸಿಂಗ್, ನಾರಾಯಣಪ್ಪ ನಾಯ್ಕ, ಜೀವಲೆಪ್ಪ ನಾಯ್ಕ, ಹನುಮಂತ ಬಡಿಗೇರ, ಶರಣಮ್ಮ ಹೂನೂರು, ಜ್ಯೋತಿ ಸುಂಕದ, ಮಲ್ಲಪ್ಪ ಹೂಗಾರ, ವೀರನಗೌಡ ಲೆಕ್ಕಿಹಾಳ, ಅಯ್ಯಪ್ಪ ಮಾಳೂರ, ಶಿವರಾಜ ನಾಯಕ, ಎನ್.ಸ್ವಾಮಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.