ADVERTISEMENT

ಮಾನ್ವಿ: ಶ್ರದ್ಧೆ, ಭಕ್ತಿಯಿಂದ ಮಹಾಶಿವರಾತ್ರಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 5:33 IST
Last Updated 16 ಫೆಬ್ರುವರಿ 2026, 5:33 IST
<div class="paragraphs"><p>ಮಾನ್ವಿಯ ಕಲ್ಮಠದ ಧ್ಯಾನ ಮಂದಿರದಲ್ಲಿ ಭಾನುವಾರ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಕ್ತರು ಶಿವಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.</p></div>

ಮಾನ್ವಿಯ ಕಲ್ಮಠದ ಧ್ಯಾನ ಮಂದಿರದಲ್ಲಿ ಭಾನುವಾರ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಕ್ತರು ಶಿವಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

   

ಮಾನ್ವಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದ ಈಶ್ವರ ದೇವಸ್ಥಾನ, ಬೆಟ್ಟದ ಮಲ್ಲಿಕಾರ್ಜುನ ದೇವಾಲಯ, ಕಲ್ಮಠದ ಧ್ಯಾನ ಮಂದಿರ ಸೇರಿದಂತೆ ವಿವಿಧೆಡೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಕಲ್ಮಠದ ಗಾರಿಗೆ ಜಾತ್ರೆ ಅಂಗವಾಗಿ 21 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಅಭಿನವ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ , ರಾಯಚೂರು ಮಂಗಳವಾರ ಪೇಟೆಯ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಪಟ್ಟಣದ ಧ್ಯಾನ ಮಂದಿರದಲ್ಲಿ ಕಲ್ಮಠದ ವತಿಯಿಂದ ಗಾರಿಗೆ ಜಾತ್ರೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಭುಲಿಂಗ ಲೀಲೆ ಪ್ರವಚನದ ಸಮಾರೋಪ ಕಾರ್ಯಕ್ರಮ ಶನಿವಾರ ನಡೆಯಿತು. ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮದ ಚನ್ನಬಸವಸ್ವಾಮಿ ಹಿರೇಮಠ ದಂಪತಿಗೆ ರಾಜ್ಯ ಮಟ್ಟದ ‘ವಿರೂಪಾಕ್ಷೇಶ್ವರ ಕೃಪಾಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ದೇಗುಲಗಳಲ್ಲಿ ವಿಶೇಷ ಪೂಜೆ

ಕವಿತಾಳ: ಮಹಾ ಶಿವರಾತ್ರಿ ಅಂಗವಾಗಿ ಪಟ್ಟಣದ ತ್ರಯಂಭಕೇಶ್ವರ ದೇವಸ್ಥಾನ ಮತ್ತು ವಟಗಲ್‌ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಭಕ್ತರು ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು.

ಜಾಗರಣೆ ನಿಮಿತ್ತ ಉಪವಾಸ ವ್ರತಕೈಗೊಂಡಿದ್ದ ಭಕ್ತರು ಬೆಳಿಗ್ಗೆಯಿಂದಲೇ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಉಪವಾಸ ವ್ರತ ಮುಗಿದ ನಂತರ ಸಂಜೆ ಬಂದ ಭಕ್ತರು ಕಾಯಿ, ಕರ್ಪೂರ, ನೈವೇದ್ಯ, ಗಾರಿಗೆ, ಕರ್ಜೂರ, ವಿವಿಧ ಬಗೆಯ ಹಣ್ಣುಗಳನ್ನು ಅರ್ಪಿಸಿ, ಉಪವಾಸ ವ್ರತ ಪೂರ್ಣಗೊಳಿಸಿದರು.

ಅರ್ಚಕ ಸಿದ್ದಯ್ಯ ಸ್ವಾಮಿ ಮತ್ತು ಚನ್ನಯ್ಯ ಸ್ವಾಮಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ ಮತ್ತು ದ್ಯಾವಮ್ಮ ದೇವಿ ದೇವಸ್ಥಾನಗಳಲ್ಲೂ ಭಕ್ತರು ಪೂಜೆ ಸಲ್ಲಿಸಿದರು. ಮಹಿಳೆಯರು ಮಕ್ಕಳು, ಸೇರಿದಂತೆ ಕುಟುಂಬ ಸಮೇತರಾಗಿ ದೇವಸ್ಥಾನಗಳಲ್ಲಿ ಶಿವನ ದರ್ಶನ ಪಡೆದು ಭಕ್ತರು ಭಕ್ತಿ ಮೆರದರು.

ಉಪವಾಸ ವ್ರತ

ಸಿರವಾರ: ಉಪವಾಸ ವ್ರತ ಆಚರಿಸುವ ಮೂಲಕ ಶಿವರಾತ್ರಿ ಆಚರಣೆಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ಭಕ್ತರು, ಪಟ್ಟಣದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ಭಾನುವಾರ ಸರದಿಯಲ್ಲಿ ನಿಂತು ಈಶ್ವರನ ದರ್ಶನ ಪಡೆದರು.

ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ವೀರಶೈವ ಸಮಾಜದಿಂದ, ಪರಮಾನಂದ ಬೆಟ್ಟದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿ ಮತ್ತು ವಾಲ್ಮೀಕಿ ಬಳಗದಿಂದ, ಪಿಡಬ್ಲ್ಯುಡಿ ಕ್ಯಾಂಪ್‌ನ ಈಶ್ವರ ದೇವಸ್ಥಾನಗಳಲ್ಲಿ ಅರ್ಚಕರಿಂದ ಬುಧವಾರ ಬೆಳಗ್ಗೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತರು ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತವಾಗಿ ಸರತಿ ಸಾಲಿನಲ್ಲಿ ಈಶ್ವರನ ದರ್ಶನ ಪಡೆದರು. ಬೆಳಗ್ಗೆಯಿಂದ ಉಪವಾಸ ಕೈಗೊಂಡಿದ್ದ ಭಕ್ತರು, ಸಂಜೆ ದೇವಸ್ಥಾನಗಳಿಗೆ ತೆರಳಿ ನೈವೇದ್ಯ ಸಮರ್ಪಿಸಿ ಉಪವಾಸವನ್ನು ಅಂತ್ಯಗೊಳಿಸಲಾಯಿತು.

ಪ್ರಸಾದ ವ್ಯವಸ್ಥೆ:

ಪಟ್ಟಣದ ಪರಮಾನಂದ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬೆಳಿಗ್ಗೆಯಿಂದ ದರ್ಶನಕ್ಕೆ ನಿರಂತರವಾಗಿ ಬರುತ್ತಿದ್ದ ಭಕ್ತರಿಗೆ, ವಾಲ್ಮೀಕಿ ವೃತ್ತದ ಯುವಕರ ಬಳಗದಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವೈವಿಧ್ಯಮಯ ಕಾರ್ಯಕ್ರಮ

ರಾಯಚೂರು: ಮಹಾಶಿವರಾತ್ರಿಯ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ 90ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ವಾಲ್ಕಟ್ ಮೈದಾನದಲ್ಲಿ ವೈವಿಧ್ಯಮಯ
ಕಾರ್ಯಕ್ರಮ ನಡೆದವು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಸ್ಮಿತಾ ಅಕ್ಕ ಮಾತನಾಡಿ, ಮೂರು ದಿನಗಳ ವರೆಗೆ ಈ ಒಂದು ಸ್ಥಳದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಶಾಂತಪ್ಪ, ರವೀಂದ್ರ ಜಲ್ದಾರ್, ಸೊಮವಾರ ಪೇಟೆಯ ಅಭಿನವ ರಾಚೊಟಿ ಶಿವಾಚಾರ್ಯ ಮಾತನಾಡಿದರು.

ಮಾಜಿ ಮೇಯರ್ ನರಸಮ್ಮ ಮಾಡಿಗೇರಿ, ಮಹ್ಮದ್ ಶಾಲಂ, ಜಯಣ್ಣ, ಶ್ರೀನಿವಾಸ ರೆಡ್ಡಿ, ರುದ್ರಪ್ಪ ಅಂಗಡಿ, ಶಿವಮೂರ್ತಿ, ವಿ. ವೆಂಕಟೇಶ, ಮುನಿಸ್ವಾಮಿ, ಹನುಮಂತ, ದಂಡಪ್ಪ ಬಿರಾದಾರ ಉಪಸ್ಥಿತರಿದ್ದರು.

ರುದ್ರಾಕ್ಷಿಗಳ ಶಿವಲಿಂಗ: ಭಕ್ತರ ಆಕರ್ಷಣೆ

ಲಿಂಗಸುಗೂರು: ಪಟ್ಟಣದ ಬಸವಸಾಗರ ವೃತ್ತದ ಬಳಿಯಿರುವ ತುಳಜಾಭವಾನಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ರುದ್ರಾಕ್ಷಿಗಳಿಂದ ನಿರ್ಮಾಣ ಮಾಡಿದ ಶಿವಲಿಂಗ ಮೂರ್ತಿ ಆಕರ್ಷಣೆಯಾಗಿತ್ತು.

ಶಿವರಾತ್ರಿ ಅಂಗವಾಗಿ ತುಳಜಾಭವಾನಿ ದೇವಸ್ಥಾನದಲ್ಲಿ ಪ್ರತಿವರ್ಷ ವಿವಿಧ ವಸ್ತುಗಳಿಂದ ಶಿವಲಿಂಗ ಮೂರ್ತಿ ನಿರ್ಮಿಸಿ, ಪೂಜೆ ಸಲ್ಲಿಸುವ ಪರಂಪರೆಯಂತೆ ಈ ವರ್ಷವೂ 10 ಸಾವಿರಕ್ಕೂ ಅಧಿಕ ರುದ್ರಾಕ್ಷಿಗಳಿಂದ ಶಿವಲಿಂಗ ನಿರ್ಮಿಸಿ ಪೂಜೆ ಸಲ್ಲಿಸಲಾಯಿತು. ತುಳಜಾಭವಾನಿ ದೇವಸ್ಥಾನದ ಅರ್ಚಕ ತಿರುಮಲರಾವ, ಕೃಷ್ಣ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ದಶರಥರಾವ ಮಿರಜಕರ, ಉಪಾಧ್ಯಕ್ಷ ಶ್ರೀನಿವಾಸ ಬುಸಾರೆ, ಖಜಾಂಚಿ ದೇವರಾಜ ಛತ್ರಬಂಧ, ಶಾಮ ಚವ್ಹಾಣ, ಪತ್ರಕರ್ತ ಗೌತಮ ಕುಮಾರ, ಸೋಮಶೇಖರ, ಪ್ರಿಯಾದರ್ಶಿನಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.