ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠವು ಸದಾ ಜಾಗೃತ ತಾಣವಾಗಿದೆ ಎಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹೇಳಿದರು.
ಮಂತ್ರಾಲಯದಲ್ಲಿ ಶುಕ್ರವಾರದಿಂದ ಆರಂಭವಾದ ಗುರು ವೈಭವೋತ್ಸವದಲ್ಲಿ ಮೊದಲ ದಿನ ನಡೆದ ರಾಯರ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ದೇವರ ಕಣ್ಣು ತಪ್ಪಿಸಿ ಮನುಷ್ಯ ಯಾವುದೇ ಕಾರ್ಯ ಮಾಡುವುದಕ್ಕೆ ಆಗುವುದಿಲ್ಲ. ಕಣ್ಣಿಗಡ ಕಾಣದ ಶಕ್ತಿ ಸದಾ ಜಾಗೃತವಾಗಿಯೇ ಇರುತ್ತದೆ. ಇದನ್ನು ದೇವರೆಂದು ಪೂಜಿಸುತ್ತಾರೆ ಎಂದರು.
ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿನ್ನುವಂತೆ ಕನಕದಾಸರಿಗೆ ಅವರ ಗುರುಗಳು ಹೇಳಿದ್ದರು. ಆದರೆ ಕನಕದಾಸರು ಬಾಳೆಹಣ್ಣು ತಿನ್ನಲಿಲ್ಲ. ದೇವರ ಕಣ್ಣು ತಪ್ಪಿಸುವುದಕ್ಕೆ ಆಗುವುದಿಲ್ಲ ಎಂದು ವಾಪಸ್ ನೀಡಿದರು. ದೇವರು ನಮ್ಮನ್ನು ನೋಡುತ್ತಿರುತ್ತಾನೆ ಎನ್ನುವ ಪ್ರಜ್ಞೆ ಇರಬೇಕು ಎಂದು ಹೇಳಿದರು.
1969ರಲ್ಲಿ ಮೊದಲಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದೆ. ಆನಂತರ ಅನೇಕ ಸಲ ಬಂದು ಹೋಗಿದ್ದೇನೆ. ಈಗ ಬಹಳಷ್ಟು ಅಭಿವೃದ್ಧಿ ಆಗಿದೆ. ಪೀಠಾಧಿಪತಿಗಳ ಆಜ್ಞೆ ಅನುಸರಿಸಿ ಈ ಸಲ ಗುರು ವೈಭವೋತ್ಸವದಲ್ಲಿ ಪಾಲ್ಗೊಳ್ಳುವ ಸುಯೋಗ ಒದಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.