ADVERTISEMENT

ಎಸ್‌ಸಿ, ಎಸ್‌ಟಿ ಯೋಜನೆ ಅನುದಾನ ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 13:03 IST
Last Updated 4 ಜುಲೈ 2021, 13:03 IST

ಮುದಗಲ್: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಇರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ ಸಮೀಪದ ಮಟ್ಟೂರು ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಸಾಕಷ್ಟು ಅನುದಾನ ದುರ್ಬಳಕೆ ಆಗಿದೆ‘ ಎಂದು ಗ್ರಾಮಸ್ಥರು ಆರೋಪಿಸಿದರು.

‘ಗ್ರಾಮದ ಚಲುವಾದಿ ಸಮುದಾಯದವರಿಗೆ ಕೃಷ್ಣ ಭಾಗ್ಯ ನಿಗಮದಿಂದ 2019-21 ಸಾಲಿನಲ್ಲಿ ಎಸ್‌ಸಿಪಿ ಅನುದಾನದಲ್ಲಿ ಸಮುದಾಯ ಭವನ ಮಂಜೂರಾಗಿದೆ. ನಿಗದಿತ ಸ್ಥಳದಲ್ಲಿ ನಿರ್ಮಾಣ ಮಾಡದೇ, ಬೇರೆ ಸ್ಥಳದಲ್ಲಿ ನಿರ್ಮಾಣ ಮಾಡಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಗುತ್ತಿಗೆದಾರರಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ‘ ಎಂದು ಮಂಜು ಮಟ್ಟೂರು ಆರೋಪಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಪರಿಶಿಷ್ಟರ ಅಭಿವೃದ್ಧಿ ಕಾಮಗಾರಿಗಳು ಹಣ ದುರ್ಬಳಕೆ ಆಗುತ್ತಿದೆ. ಪರಿಶಿಷ್ಟರ ಕಾಲೊನಿಯಲ್ಲಿ ಸಮುದಾಯ ಭವನ, ಸಿಸಿ ರಸ್ತೆಗಳು ಬೇರೆ ಕಡೆ ಹಾಗೂ ಬೇಕಾ ಬಿಟ್ಟಿ ನಿರ್ಮಾಣ ಮಾಡಿ, ಹಣವನ್ನು ದುರ್ಬಳಕೆ ಮಾಡಿದ್ದಾರೆ.

ADVERTISEMENT

ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳಿದರೇ, ಸಮರ್ಪಕವಾದ ಮಾಹಿತಿ ನೀಡಲ್ಲ. ಇದ್ದರಿಂದ ನಮ್ಮ ಸಮುದಾಯಕ್ಕೆ ಬಹಳಷ್ಟು ಅನ್ಯಾಯವಾಗುತ್ತಿದೆ. ದಲಿತರ ಕೇರಿಗಳಲ್ಲಿ ಇದುವರೆಗೂ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ. ಸಮುದಾಯ ಭವನ ಸೇರಿದಂತೆ ಇನ್ನಿತರ ಕಾಮಗಾರಿಗಳು ನಮ್ಮ ವಾರ್ಡಿನಲ್ಲಿ ಮಾಡಬೇಕು ಎಂದು ಬಸವರಾಜ, ಮರಿಯಪ್ಪ, ಶಂಕ್ರಪ್ಪ, ವೀರಭದ್ರಪ್ಪ, ನಿರುಪಾದೇಪ್ಪ, ಹೊಳೆಯಪ್ಪ, ಅಯ್ಯಪ್ಪ, ಹುಸೇನಪ್ಪ, ಹಸನಸಾಬ್, ಶಿವಪ್ಪ, ಬಸವಂತ, ರಮೇಶ, ರೇಣಪ್ಪ, ಆದಪ್ಪ ಒತ್ತಾಯಿಸಿದರು.

‘ನಿಗದಿತ ಸ್ಥಳದಲ್ಲಿಯೇ ಭವನ ನಿರ್ಮಾಣ ಮಾಡಿದ್ದೇವೆ. ಜನರು ಸುಳ್ಳು ಆರೋಪ ಮಾಡುತ್ತಿದ್ದಾರೆ‘ ಎಂದು ಗುತ್ತಿಗೆದಾರ ಅಮೀನಸಾಬ್‌ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.