ರಾಯಚೂರು: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಸ್ಲಿಂ ವೈದ್ಯೆಯ ನಕಾಬ್ ಎಳೆದಿರುವುದನ್ನು ವಿರೋಧಿಸಿ ವಕ್ಫ್ ಸಂರಕ್ಷಣಾ ಸಂಘದ ನೇತೃತ್ವದಲ್ಲಿ ಮುಸ್ಲಿಂ ಮಹಿಳೆಯರು ಇಲ್ಲಿಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಮುಸ್ಲಿಂ ಸಂಪ್ರದಾಯವನ್ನು ಅವಮಾನಿಸಿರುವ ನಿತೀಶ್ ಕುಮಾರ್, ತಕ್ಷಣವೇ ಕ್ಷಮೆ ಯಾಚಿಸಬೇಕು. ದೇಶದಲ್ಲಿ ಎಲ್ಲ ಜನ ಸಮುದಾಯವರಿಗೂ ಅವರು ಇಷ್ಟಪಡುವ ಸಾಂಪ್ರದಾಯಿಕ ಬಟ್ಟೆಗಳನ್ನು ತೊಡುವ ಅಧಿಕಾರ ಇದೆ. ಆದರೆ, ನಿತೀಶ್ ಕುಮಾರ್ ನಡೆ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಹಿಳೆಯರು ನಿತೀಶ್ ಕುಮಾರ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದರು. ಅಲ್ಪಸಂಖ್ಯಾತರು ಹಾಗೂ ಅಲ್ಪಸಂಖ್ಯಾತ ಮಹಿಳೆಯರನ್ನು ಅವಮಾನಿಸುವುದು ನಿರಂತರವಾಗಿ ನಡೆದಿದೆ. ಇನ್ನು ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಸಾಹೇಬ್ ಹಾಗೂ ಕಾರ್ಯದರ್ಶಿ ತೌಸೀಫ್ ಅಹ್ಮದ್ ಮಾತನಾಡಿ, ‘ಇಂತಹ ಕ್ರಮಗಳು ಸಂವಿಧಾನ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿವೆ‘ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಅಕ್ಬರ್ ಹುಸೇನ್ ನಗುಂಡಿ, ಫರ್ಜಾನಾ ಖಾನಂ, ನಯ್ಯರ್ ತಯ್ಯಬಾ, ಮತೀನ್ ಅನ್ಸಾರಿ, ಸಯ್ಯದ್ ಇನಾಯತುಲ್ಲಾ ಕ್ವಾದ್ರಿ ಸಾಹೇಬ್, ಸಯ್ಯದ್ ಮುರ್ಷದ್ ಜಾನಿ ಸಾಹೇಬ್, ಮೊಹಮ್ಮದ್ ಮಸೂಮ್, ಜಫರ್ ಅಹ್ಮದ್, ಎಂ.ಡಿ. ಶಫಿ, ತಬ್ಬಸ್ಸುಮ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.