ADVERTISEMENT

ಆಳದ ಕಣಿವೆಗಿಳಿದು ನೀರು ತರುವ ಸಂಕಷ್ಟ: ಗಲಗಿನವರ ದೊಡ್ಡಿಗೆ ಅಧಿಕಾರಿಗಳ ಭೇಟಿ

‘ಪ್ರಜಾವಾಣಿ’ ಮೇ 11 ರ ಸಂಚಿಕೆಯಲ್ಲಿ ಪ್ರಕಟವಾದ ಚಿತ್ರದ ಫಲಶೃತಿ, ಪೈಪ್‌ಲೈನ್‌ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 11 ಮೇ 2019, 13:43 IST
Last Updated 11 ಮೇ 2019, 13:43 IST
ಲಿಂಗಸುಗೂರು ತಾಲ್ಲೂಕಿನ ಗಲಗಿನವರ ದೊಡ್ಡಿ ಹತ್ತಿರ ನನೆಗುದಿದೆ ಬಿದ್ದಿದ್ದ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಯನ್ನು ಶನಿವಾರ ಆರಂಭಿಸಲಾಗಿದೆ
ಲಿಂಗಸುಗೂರು ತಾಲ್ಲೂಕಿನ ಗಲಗಿನವರ ದೊಡ್ಡಿ ಹತ್ತಿರ ನನೆಗುದಿದೆ ಬಿದ್ದಿದ್ದ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಯನ್ನು ಶನಿವಾರ ಆರಂಭಿಸಲಾಗಿದೆ   

ಲಿಂಗಸುಗೂರು (ರಾಯಚೂರು): ದೇವರಭೂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 150 ಅಡಿ ಆಳದ ಕಣಿವೆಗೆ ಇಳಿದು ಜನರು ಕುಡಿಯುವ ನೀರು ತೆಗೆದುಕೊಳ್ಳುವ ಸಂಕಷ್ಟ ಸ್ಥಿತಿ ಇರುವ ಗಲಗಿನವರ ದೊಡ್ಡಿಗೆ ಅಧಿಕಾರಿಗಳ ತಂಡವು ಶನಿವಾರ ಭೇಟಿ ನೀಡಿದೆ. ನನೆಗುದಿಗೆ ಬಿದ್ದಿದ್ದ ನೀರೊದಗಿಸುವ ಪೈಪ್‌ಲೈನ್‌ ಕಾಮಗಾರಿಯನ್ನು ತುರ್ತಾಗಿ ಆರಂಭಿಸಿದ್ದಾರೆ.

ಲಿಂಗಸುಗೂರು ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ವಡ್ಡರ ಭೇಟಿ ನೀಡಿ ಜನರೊಂದಿಗೆ ನೀರಿನ ಸಮಸ್ಯೆ ಕುರಿತು ಚರ್ಚಿಸಿದರು.

‘ದೊಡ್ಡಿಯಲ್ಲಿ ಕೊಳವೆಬಾವಿ ಕೈಪಂಪ್‌ ಇದ್ದರೂ 150 ಅಡಿ ಆಳದ ಕಾಲುವೆಗೆ ಇಳಿದು ನೀರು ತುಂಬುವುದು ಅಪಾಯ. ಅಂತಹ ಕೆಲಸ ಜನರು ಮಾಡಬಾರದು. ಕೊಳವೆಬಾವಿ ದುರಸ್ತಿ ಮಾಡದೆ ಹೋದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಪಂಪ್‌ಸೆಟ್‌ಗೆ ಶಾಶ್ವತ ವಿದ್ಯುತ್‌ ಒದಗಿಸಲಾಗುವುದು’ ಎಂದು ಜಾಗೃತಿ ಮೂಡಿಸಿದರು.

ಗಲಗಿನವರದೊಡ್ಡಿ ಜನರು ಪ್ರಾಣದ ಹಂಗುತೊರೆದು 150 ಅಡಿ ಆಳದ ಕಣಿವೆಗೆ ಇಳಿದು ಕೊಡಗಳಲ್ಲಿ ನೀರು ತುಂಬಿಸಿಕೊಳ್ಳುವ ಚಿತ್ರವನ್ನು ‘ಪ್ರಜಾವಾಣಿ’ ಮುಖ ಪುಟದಲ್ಲಿ ಮೇ 11 ರ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು. ಚಿತ್ರ ಪ್ರಕಟವಾದ ದಿನವೇ ಅಧಿಕಾರಿಗಳು ನನೆಗುದಿಗೆ ಬಿದ್ದಿದ್ದ ಪೈಪ್‌ಲೈನ್‌ ಕೆಲಸ ಆರಂಭಿಸಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.