ರಾಯಚೂರು: ಕಬ್ಬಿಣದ ಕೊರತೆಯಿಂದ ಮೂಸಂಬಿ ಬಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಬೋರಾನ್ ಕೊರತೆಯಿಂದಾಗಿ ಎಲೆಗಳ ಮುದುಡುವಿಕೆ, ಹಣ್ಣುಗಳು ಕಪ್ಪಾಗುವಿಕೆ ಮತ್ತು ಹಣ್ಣುಗಳ ಸೀಳುವಿಕೆ ಕಾಣುತ್ತದೆ ಎಂದು ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ಎಸ್.ಎನ್. ಭಟ್ ಹೇಳಿದರು.
ತಾಲ್ಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಿಂದ ಮಂಗಳವಾರ ಆಯೋಜಿಸಿದ್ದ ‘ಮೂಸಂಬಿ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ’ ಕುರಿತ ಹೊರ ಆವರಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದರ ನಿರ್ವಹಣೆಗಾಗಿ ಬೋರಾಕ್ಸ್ 3 ಗ್ರಾಂ ಪ್ರತಿ ಲೀಟರ್ ನೀರಿಗೆ ಮತ್ತು ಕಬ್ಬಿಣದ ಸಲ್ಫೇಟ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು.
ಚಂದ್ರಬಂಡ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮೂಸಂಬಿ, ಮಾವು, ಪೇರಲ ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದು, ಈ ಬೆಳೆಗಳಲ್ಲಿ ಲಘು ಪೋಷಕಾಂಶಗಳ ಕೊರತೆಯು ಅಧಿಕವಾಗಿ ಕಂಡುಬಂದಿದೆ. ಈ ಸಮಸ್ಯೆಯನ್ನು ನಿರ್ವಹಣೆ ಮಾಡಲು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮೂಸಂಬಿ ಬೆಳೆಯಲ್ಲಿ ಲಘು ಪೋಷಕಾಂಶಗಳ ಕೊರತೆಯ ನಿರ್ವಹಣಾ ಕ್ರಮಗಳ ಪರಿಶೀಲನೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೃಷಿ ವಿಜ್ಞಾನಿಗಳಾದ ಡಾ. ಹೇಮಲತಾ ಕೆ.ಜೆ., ಡಾ. ಶ್ರೀವಾಣಿ ಜಿ.ಎನ್. ಡಾ. ಅನುಪಮಾ ಅವರು ರೈತರಿಗೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ಅತಿಹೆಚ್ಚು ಅಂಕ ಪಡೆದಿರುವ ಯಾಪಲದಿನ್ನಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಾದ ಸಂಧ್ಯಾ, ಶ್ರೀನಿವಾಸ, ಭಾಸ್ಕರ, ರಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ಮುಖಂಡ ತಿಮ್ಮಪ್ಪ, ವಿಶ್ವನಾಥ, ಅಂಜಿನೇಯ್ಯ, ಶಿವಕುಮಾರ, ಜಗನ್ನಾಥ, ಭುಜಂಗ ರೆಡ್ಡಿ, ಅತಿಥಿ ಉಪನ್ಯಾಸಕ ಮೊಲಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.