ದೇವಸೂಗೂರು (ಶಕ್ತಿನಗರ): ‘ಸಾರ್ವಜನಿಕರ ಪ್ರತಿಯೊಂದು ಮಾಹಿತಿಯನ್ನು ಒದಗಿಸುವ ಏಕಗವಾಕ್ಷಿ ಮತ್ತು ಏಕೀಕೃತ ವೆಬ್ ಪೋರ್ಟಲ್ (ಮಾಹಿತಿ ಕಣಜ ಪೋರ್ಟಲ್)ಆಗಿದೆ’ ಎಂದು ದೇವಸೂಗೂರು ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ ಹೇಳಿದರು.
ದೇವಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ ದೊಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗಾಗಿ ಮಾಹಿತಿ ಕಣಜ ಪೋರ್ಟಲ್ ಕುರಿತು ಮತ್ತು 2022–23ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೊಳ್ಳುವ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಏರ್ಪಡಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ನೈಜ ಸಮಯದ ದತ್ತಾಂಶ ಲಭ್ಯತೆ, ಆರ್.ಟಿ.ಐ.ಅರ್ಜಿಗಳ ಕಡಿತ, ಉತ್ತಮ ಆಡಳಿತ, ಮಾಹಿತಿ ಕಣಜದ ವೈಶಿಷ್ಟಗಳು, ಪಾರದರ್ಶಕತೆ, ಫಲಾನುಭವಿಗಳ ಅರ್ಹತಾ ಸ್ಥಿತಿ, ಯಾವುದೇ ಬಳಕೆದಾರರ ನೋಂದಣಿ ಅಗತ್ಯವಿಲ್ಲ.
226 ಯೋಜನೆಗಳು, ಸೇವೆಗಳು ಮತ್ತು 62 ಇಲಾಖೆಗಳಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳನ್ನು ರಾಜ್ಯದ ನಾಗರಿಕರಿಗೆ, ಒಂದೇ ಸೂರಿನಡಿ ಪಡೆಯಲು ಮಾಹಿತಿ ಕಣಜ ವೆಬ್ ಪೋರ್ಟಲ್ ಉದ್ದೇಶ. ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ನಂತರ, 2022–23ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿಗಳ ಬೇಡಿಕೆಯ ಅವಶ್ಯಕತೆಗನುಗುಣವಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ಕುರಿತು ಚರ್ಚಿಸಲಾಯಿತು. ವೈಯಕ್ತಿಕ ಕಾಮಗಾರಿಗಳು, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಿಡಿಒ ಸೂಚಿಸಿದರು.
ಸಭೆಯಲ್ಲಿ ದೇವಸೂಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾದೇವಿ ದೇಸಾಯಿ, ನೋಡಲ್ ಅಧಿಕಾರಿ ಶಿವಾನಂದ, ಲೆಕ್ಕಾಧಿಕಾರಿ ಉದಯಕುಮಾರ, ಬಿಲ್ ಕಲೆಕ್ಟರ್ ಸುರೇಶ ಮಾನ್ವಿ , ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.