ರಾಯಚೂರು: ತುಂಗಭದ್ರ ಎಡದಂಡೆ ಕಾಲುವೆ (ಟಿಎಲ್ಬಿಸಿ) ಅಕ್ರಮ ನೀರಾವರಿ ತಡೆಯುವುದಕ್ಕಾಗಿ ಆಗಸ್ಟ್ 6 ರಿಂದ ಪಕ್ಷಾತೀತವಾಗಿ ಅಹಿಂಸಾತ್ಮಕ ಮಾರ್ಗದಲ್ಲಿ ಹೋರಾಟ ಮಾಡುವುದಕ್ಕೆ ತುಂಗಭದ್ರಾ ಎಡದಂಡೆ ಕಾಲುವೆ ಹಿತರಕ್ಷಣಾ ಸಮಿತಿ ನಿರ್ಧರಿಸಿತು.
ನಗರದ ಜೆಸಿ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಿದರು. ಶಾಸಕ ಬಸನಗೌಡ ದದ್ದಲ, ಕಾಂಗ್ರೆಸ್ ಮುಖಂಡ ಹಂಪಯ್ಯ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು, ಬಿಜೆಪಿ ಮುಖಂಡರಾದ ಬಸನಗೌಡ ಬ್ಯಾಗವಾಟ್, ಶರಣಪ್ಪಗೌಡ ಜಾಡಲದಿನ್ನಿ, ನಾಗನಗೌಡ ಹರವಿ ಭಾಗವಹಿಸಿದ್ದರು.
ಪ್ರತಿ ಕಾಲುವೆಯಿಂದಲೂ ನೂರಾರು ರೈತರನ್ನು ಹೋರಾಟಕ್ಕೆ ಕರೆ ತರಬೇಕು. ಮೆರವಣಿಗೆ ಉದ್ದಕ್ಕೂ ಸಕಲ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಯೋಜಿಸಲಾಯಿತು. 15 ದಿನಗಳವರೆಗೂ ನಿರಂತರ ಹೋರಾಟ ಮುಂದುವರಿಯುತ್ತದೆ ಎಂದು ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಅವರು ತಿಳಿಸಿದರು.
ಅಕ್ರಮ ನೀರಾವರಿಯಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ ಸೇರಿದಂತೆ ಅನೇಕ ಪ್ರಭಾವಿಗಳಿದ್ದಾರೆ. 6 ರಿಂದ ನಡೆಯುವ ಹೋರಾಟವನ್ನು ಯಶಸ್ವಿ ಮಾಡಬೇಕಿದೆ ಎಂದು ರೈತ ಮುಖಂಡ ಚಾಮರಸ ಮಾಲಿಪಾಟೀಲ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.