ರಾಯಚೂರು: ರಾಯಚೂರು ನಗರಕ್ಕೆ ಮೂಲ ಸೌಕರ್ಯಗಳು ಒದಗಿಸುವಂತೆ ಡಿಸೆಂಬರ್16 ರಂದು ನಗರಸಭೆ ವಿರುದ್ಧ ರಾಯಚೂರು ಉಳಿಸಿ ಹೋರಾಟ ಸಮಿತಿಯಿಂದ ಧರಣಿ ನಡೆಸಲಾಗುವುದು ಎಂದು ಹೋರಾಟ ಸಮಿತಿ ಸಂಚಾಲಕ ರಜಾಕ್ ಉಸ್ತಾದ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲಾ ಕೇಂದ್ರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಗರಕ್ಕೆ ಬೇಕಾದ ಮೂಲಸೌಕರ್ಯಗಳಲ್ಲಿ ಪ್ರಮುಖವಾಗಿ ರಸ್ತೆಗಳು ಮತ್ತು ಬೀದಿ ದೀಪಗಳು ಇಲ್ಲ. ಕಸ ನಿರ್ವಹಣೆ ಸಮಸ್ಯೆ, ಧೂಳು ಮುಕ್ತ ನಗರ, 24 ಗಂಟೆ ನೀರು ಸರಬರಾಜು ಹಾಗೂ ಯುಜಿಡಿ ಯೋಜನೆ, ರಸ್ತೆ ಬದಿ ವಿದ್ಯುತ್ ಟಿ.ಸಿಗಳ ಅಳವಡಿಕೆ ನಿಷೇಧಿಸಿ, ಸೇರಿದಂತೆ ಇನ್ನೂ ಮುಂತಾದ ಜ್ವಲಂತ ಸಮಸ್ಯೆಗಳನ್ನು ಈಡೇರಿಸುವಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತ ವಿಫಲಗೊಂಡಿವೆ ಎಂದು ಆರೋಪಿಸಿದರು.
ನಗರದ ಕರವೇ, ವಾಲ್ಮೀಕಿ ಸೇವಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಒಟ್ಟುಗೂಡಿ ಪ್ರತಿಭಟಿಸುತ್ತೇವೆ ಎಂದರು.
ಸ್ಥಳೀಯ ಶಾಸಕರ ವೈಫಲ್ಯ ಎದ್ದು ಕಾಣುತ್ತಿದೆ. ಕೋಟ್ಯಂತರ ಅನುದಾನ ತಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಯಾವ ಕಾಮಗಾರಿಗಳು ಪೂರ್ಣವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳನ್ನು ಸ್ಥಾಪಿಸುವುದಕ್ಕೆ ಹೆಚ್ಚು ಆಸಕ್ತಿ ಇರುವ ಶಾಸಕರಿಗೆ ಒಪೆಕ್ ಉಳಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಮುಖಂಡರಾದ ಶಿವಕುಮಾರ ಯಾದವ್, ಕೆ.ಇ.ಕುಮಾರ್, ವೀರೇಶ ಹೀರಾ, ಅಶೋಕ ಕುಮಾರ ಜೈನ್, ಲಾಲಪ್ಪ ನಾಯಕ, ಎನ್.ಮಹಾವೀರ, ಮಹ್ಮದ್ ರಫೀಕ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.