ಪಾಮನಕಲ್ಲೂರು (ಕವಿತಾಳ): ‘ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಮನವಿ ಮಾಡಿದ್ದರೂ ಅಭಿವೃದ್ದಿ ಅಧಿಕಾರಿ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿ ಮಸ್ಕಿ ತಾಲ್ಲೂಕಿನ ಹರ್ವಾಪುರ ಗ್ರಾಮದ ಕೂಲಿಕಾರರು ಪಾಮನಕಲ್ಲೂರು ಗ್ರಾಮ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
‘ಖಾತರಿ ಯೋಜನೆಯಡಿ ನೋಂದಣಿ ಮಾಡಿಕೊಂಡ ಗ್ರಾಮದ ಕೂಲಿಕಾರರ ಬಹುತೇಕ ಕುಟುಂಬಗಳು ಖಾತರಿ ಕೆಲಸದ ಮೇಲೆ ಅವಲಂಬಿತವಾಗಿವೆ. ಕೆಲಸ ನೀಡುವಂತೆ ಅಭಿವೃದ್ದಿ ಅಧಿಕಾರಿಗಳಿಗೆ ಕಳೆದ ಎರಡು ತಿಂಗಳಿಂದ ಮೌಖಿಕವಾಗಿ ಮನವಿ ಮಾಡುತ್ತಿದ್ದರೂ ಕೆಲಸ ನೀಡುತ್ತಿಲ್ಲ. ಹೀಗಾಗಿ ಕೆಲಸವಿಲ್ಲದೆ ಕೂಲಿಕಾರರಿಗೆ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಗ್ರಾಮದ ಖಂಡೋಜಿರಾವ್ ದೂರಿದರು.
‘ನಿಗದಿತ ನಮೂನೆಯಲ್ಲಿಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. 15 ದಿನಗಳಲ್ಲಿ ಆದ್ಯತೆ ಮೇರೆಗೆ ಕೆಲಸ ನೀಡಲಾಗುವುದು ಅಗತ್ಯವಿದ್ದರೆ ನಾಳೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಅಭಿವೃದ್ದಿ ಅಧಿಕಾರಿ ಅಮರೇಶ ಹೇಳಿದರು. ಆದಪ್ಪ ಬುರ್ನಟ್ಟಿ, ವಿರೂಪಾಕ್ಷ ಬಳಿಗಾರ, ಅಶೋಕ, ನಾಗಪ್ಪ, ಶಿವಣ್ಣ, ಲೋಯಪ್ಪ, ಆದಯ್ಯ ಸ್ವಾಮಿ, ಅಮರಮ್ಮ, ಶಿವಮ್ಮ, ತಿಮ್ಮಮ್ಮ, ಅಮೀನಾಬೀ ಮತ್ತು ಬಸ್ಸಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.