
ಅರಕೇರಾ (ದೇವದುರ್ಗ): ವಿಷಪೂರಿತ ನೀರು ಕುಡಿದು 50ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹೆಗ್ಗಡದಿನ್ನಿ ಗ್ರಾಮದ ಬಳಿ ನಡೆದಿದೆ.
ಸಂಚಾರಿ ಕುರಿಗಾಹಿ ಭೀಮಪ್ಪ ಮಲ್ಲಿನಾಯಕನದೊಡ್ಡಿ ಅವರಿಗೆ ಈ ಕುರಿಗಳು ಸೇರಿವೆ. ಗುಂಡಿಯಲ್ಲಿ ಶೇಖರಣೆಯಾಗಿದ್ದ ನೀರನ್ನು 100 ಕುರಿಗಳು ಕುಡಿದಿದ್ದು, ಈ ಪೈಕಿ ಹೊಟ್ಟೆ ಉಬ್ಬಸದಿಂದ ಏಕಾಏಕಿ 50ಕ್ಕೂ ಹೆಚ್ಚು ಸಾವನ್ನಪ್ಪಿವೆ. ಬದುಕುಳಿದಿರುವ ಕುರಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ವಾಗುವ ಸಾಧ್ಯತೆ ಇದೆ ಎಂದು ಪಶು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಸುಮಾರು ₹5 ಲಕ್ಷ ಅಧಿಕ ನಷ್ಟವಾಗಿದ್ದು, ಕುರಿಗಾಹಿ ಕಣ್ಣೀರು ಹಾಕಿದರು. ನೀರಿನಲ್ಲಿ ಕ್ರಿಮಿನಾಶಕ ಬೆರೆಸಿರುವ ಶಂಕೆಯಿದ್ದು, ಸ್ಥಳಕ್ಕೆ ಗಬ್ಬೂರು ಠಾಣೆ ಪೊಲೀಸರು, ಪಶು ವೈದ್ಯಾಧಿಕಾರಿಗಳು, ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಶಾಸಕಿ ಕರೆಮ್ಮ ಜಿ ನಾಯಕ ಭೇಟಿ ನೀಡಿ ಕುರಿಗಾಹಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.