ADVERTISEMENT

ರಾಯಚೂರು: ದರ ಕುಸಿತಕ್ಕೆ ಬೇಸತ್ತು ಬದನೆಕಾಯಿ ಗಿಡ ಕಿತ್ತುಹಾಕಿದ ರೈತ

​ಪ್ರಜಾವಾಣಿ ವಾರ್ತೆ
Published 1 ಮೇ 2020, 12:53 IST
Last Updated 1 ಮೇ 2020, 12:53 IST
ದರ ಕುಸಿತದಿಂದ ಕಂಗೆಟ್ಟು ಎರಡು ಎಕರೆಯಲ್ಲಿ ಬೆಳೆದಿದ್ದ ಬದನೆ ಬೆಳೆ ನಾಶ ಮಾಡಿದ ರೈತ
ದರ ಕುಸಿತದಿಂದ ಕಂಗೆಟ್ಟು ಎರಡು ಎಕರೆಯಲ್ಲಿ ಬೆಳೆದಿದ್ದ ಬದನೆ ಬೆಳೆ ನಾಶ ಮಾಡಿದ ರೈತ   
""

ರಾಯಚೂರು: ಮಾರುಕಟ್ಟೆಯಲ್ಲಿ ಬದನೆಕಾಯಿಗೆ ಬೇಡಿಕೆಯಿಲ್ಲದೆ ನಷ್ಟ ಅನುಭವಿಸಿರುವ ತಾಲ್ಲೂಕಿನ ಪಲಕಂದೊಡ್ಡಿ ಗ್ರಾಮದ ಯುವ ರೈತ ಬಸವರಾಜ ಅವರು ಎರಡು ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನೆಲ್ಲ ಕಿತ್ತುಹಾಕಿದ್ದಾರೆ.

‘ಮಾರ್ಚ್‌ ಆರಂಭದಲ್ಲಿ 15 ಕೆಜಿ ಬದನೆಕಾಯಿ ಒಂದು ಚೀಲಕ್ಕೆ ₹150 ರವರೆಗೂ ದರ ಸಿಕ್ಕಿತ್ತು. ಈಗ ಒಂದು ಚೀಲಕ್ಕೆ ₹20 ರಿಂದ ₹30ಕ್ಕೆ ಕೇಳುತ್ತಿದ್ದಾರೆ. ರಾಯಚೂರು ತರಕಾರಿ ಮಾರುಕಟ್ಟೆಗೆ ಕಳುಹಿಸಿದ್ದ ಬದನೆಕಾಯಿ ಚೀಲಗಳು ಅಲ್ಲಿಯೇ ಉಳಿದಿವೆ. ಬದನೆಕಾಯಿ ಚೀಲದ ದರ ₹20 ಇದೆ. ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಕ್ಕೆ ₹10 ಖರ್ಚಾಗುತ್ತದೆ. ಈ ಪರಿಸ್ಥಿತಿಯಿಂದ ಬೇಸತ್ತು ಗಿಡ ಕಿತ್ತುಹಾಕುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಯೊಂದಿಗೆ ನೋವು ಹಂಚಿಕೊಂಡರು.

‘ವಾರಕ್ಕೆ ಎರಡು ಸಲ ಔಷಧಿ ಸಿಂಪರಣೆ ಮಾಡದಿದ್ದರೆ ಬದನೆಕಾಯಿ ಗಿಡದಲ್ಲೇ ಹಾಳಾಗುತ್ತದೆ. ಮೂರುವರೆ ಎಕರೆ ಬದನೆಕಾಯಿ ಬೆಳೆಯುವುದಕ್ಕೆ ಮೂರುವರೆ ಲಕ್ಷ ಖರ್ಚಾಗಿದೆ. ಒಂದೂವರೆ ಎಕರೆ ಬದನೆಕಾಯಿ ಗಿಡಗಳು ಇನ್ನೂ ಕೊಯ್ಲಿಗೆ ಬಂದಿಲ್ಲ. ಮುಂದಾದರೂ ದರ ಸಿಗಬಹುದು ಎಂದು ಅಷ್ಟು ಉಳಿಸಿಕೊಂಡಿದ್ದೇನೆ. ಕೊರೊನಾ ವೈರಸ್‌ನಿಂದಾಗಿ ಈ ಸಲ ನಷ್ಟ ಅನುಭವಿಸುವಂತಾಯಿತು’ ಎಂದರು.

ADVERTISEMENT

ಬೇಸಿಗೆಯಲ್ಲಿ ಸಭೆ, ಸಮಾರಂಭಗಳು ಹಾಗೂ ಮದುವೆಗಳು ನಡೆಯುವುದರಿಂದ ಬದನೆಕಾಯಿಗೆ ಒಳ್ಳೆಯ ದರ ಸಿಗುತ್ತದೆ ಎನ್ನುವ ರೈತನ ನಿರೀಕ್ಷೆ ಹುಸಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.