ರಾಷ್ಟ್ರೀಯ ಹೆದ್ದಾರಿ (150 ಎ)ಯಲ್ಲಿ ಮಸ್ಕಿ–ಸಿಂಧನೂರು ರಸ್ತೆಯ ಬೂತಲದಿನ್ನಿ ಬಳಿ ಬೈಪಾಸ್ನ ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿ ನಡೆದಿದೆ.
ರಾಯಚೂರು: ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಅಬ್ಬರಿಸಿದ ಮಳೆಗೆ ಲಿಂಗಸುಗೂರು, ಹಟ್ಟಿಚಿನ್ನದಗಣಿ ಹಾಗೂ ಸಿಂಧನೂರು ತಾಲ್ಲೂಕಿನ ಕೆಲ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮೂರು ಕಡೆ ಹಳ್ಳದ ಸೇತುವೆಗಳ ಮೇಲೆ ನೀರು ಬಂದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಬೀದರ್–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ (150 ಎ) ಮಸ್ಕಿ–ಸಿಂಧನೂರು ರಸ್ತೆಯ ಬೂತಲದಿನ್ನಿ ಬಳಿ ಬೈಪಾಸ್ನ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು, ಸೋಮವಾರವೂ ಹೆದ್ದಾರಿ ಮೇಲೆ ನೀರು ಹರಿಯುತ್ತಿದೆ. ಬೆಂಗಳೂರು–ಕಲಬುರಗಿ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಬಸ್ಗಳು ಪಗಡದಿನ್ನಿ ಮಾರ್ಗವಾಗಿ 15 ಕಿ.ಮೀ ಸುತ್ತು ಹಾಕಿಕೊಂಡು ಹೋಗುತ್ತಿವೆ. ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದಾರೆ.
ಸಿಡಿಲು ಬಡಿದು ಬಿದ್ದ ಗೋಡೆ:
ಲಿಂಗಸುಗೂರು ತಾಲ್ಲೂಕಿನ ಆನಾಹೊಸೂರು- ಜಾಗಿರನಂದಿಹಾಳ ನಡುವಿನ ಹಳ್ಳ ಭರ್ತಿಯಾಗಿ ಹರಿಯುತ್ತಿದ್ದರಿಂದ ಜಾಗಿರನಂದಿಹಾಳ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂದಿನಿಂದ ಅರ್ಧವಾರ್ಷಿಕ ಪರೀಕ್ಷೆ ಆರಂಭವಾಗಿದ್ದರಿಂದ ಜಾಗಿರನಂದಿಹಾಳ ಗ್ರಾಮದ ವಿದ್ಯಾರ್ಥಿಗಳು 20 ಕಿ.ಮೀ ಸುತ್ತುವರಿದು ಲಿಂಗಸುಗೂರು ಪಟ್ಟಣಕ್ಕೆ ತೆರಳಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಲಿಂಗಸುಗೂರು ಪಟ್ಟಣದ ಐದನೇ ವಾರ್ಡಿನ ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯ ಗೋಡೆ ಕುಸಿದು ಬಿದ್ದು ಬೈಕ್ ಜಖಂಗೊಂಡಿದೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಇಒ ಮನೆ ಹತ್ತಿರದಲ್ಲಿ ಬೃಹತ್ ಮರ ಬಿದ್ದಿದೆ.
ಹಟ್ಟಿ ಚಿನ್ನದ ಗಣಿ ಸಮೀಪ ಗುಡದನಾಳ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣ ಸೇರಿದಂತೆ ಗುರುಗುಂಟಾ ಹೋಬಳಿ ವ್ಯಾಪ್ತಿಯ ಗ್ರಾಮದಲ್ಲಿ ಮಳೆಗೆ 16 ಮನೆಗಳು ಕುಸಿದು ಬಿದ್ದಿವೆ. ‘ಗುರುಗುಂಟಾದಲ್ಲಿ 77 ಮಿಲಿ ಮೀಟರ್ ಮಳೆ ದಾಖಲಾಗಿದೆ. ಪೈದೊಡ್ಡಿ ಹಾಗೂ ಯರಜಂತಿ ಗ್ರಾಮದಲ್ಲಿ 4 ಗುರುಗುಂಟಾ ಗ್ರಾಮದಲ್ಲಿ 12 ಮನೆಗಳು ಮಳೆಗೆ ಹಾನಿಯಾಗಿವೆ’ ಎಂದು ನಿವಾಸಿಗಳಾದ ಅಯ್ಯಪ್ಪ, ರಂಗಪ್ಪ, ಹನುಮೇಶ, ಕಮಲಾಕ್ಷಿ, ಅಂಬುಜಾ, ಹುಸೇನಬೀ ತಿಳಿಸಿದರು. ಗ್ರಾಮದಲ್ಲಿ ಮಳೆಗೆ ಹಾನಿಯಾದ ಸ್ಧಳಕ್ಕೆ ಕಂದಾಯ ಅಧಿಕಾರಿಗಳಾದ ಮಲ್ಲಿಕಾರ್ಜುನ ಕ್ಯಾತನಾಳ ಹಾಗೂ ಸಿಬ್ಬಂದಿ ಸ್ಧಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಮಾಹಿತಿಯನ್ನು ತಹಶೀಲ್ದಾರ್ ಗಮನಕ್ಕೆ ತಂದು ಪರಿಹಾರ ನೀಡಲು ಕ್ರಮಕ್ಕೆ ಮುಂದಾಗಲಾಗುವುದು ಎಂದು ಕಂದಾಯ ಅಧಿಕಾರಿಗಳು ಭರವಸೆ ನೀಡಿದರು. ಮೇದಿನಾಪುರ ಗ್ರಾಮದ ಹಳ್ಳ ಮೈದುಂಬಿ ಹರಿದಿದ್ದು, ಮೂರು ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಗುಡದನಾಳ ಹಳ್ಳ ತುಂಬಿ ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿತವಾಗಿತ್ತು, ಕಾರ್ಮಿಕರು ಮಕ್ಕಳು ಕೋಠಾ ಗ್ರಾಮದ ಮೂಲಕ ಹಟ್ಟಿ ಪಟ್ಟಣಕ್ಕೆ ತೆರಳಿದರು. ಲಿಂಗಸುಗೂರು ತಾಲ್ಲೂಕಿನ ಮೇದಿನಾಪೂರ ಹಳ್ಳದ ಪ್ರವಾಹದಲ್ಲಿ ಮೂರು ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಹಟ್ಟಿ ಗುಡದನಾಳ– ಮೇದಿನಾಪೂರ ನಡೆವಿನ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಹಟ್ಟಿ ಪಟ್ಟಣದಿಂದ ಲಿಂಗಸುಗೂರಿಗೆ ಕೋಠಾ ಗ್ರಾಮದ ಮೂಲಕ ತೆರಳಿದರು.
ಲಿಂಗಸುಗೂರು ತಾಲ್ಲೂಕಿನ ಮೇದಿನಾಪೂರ ಹಳ್ಳದ ಪ್ರವಾಹದಲ್ಲಿ ಮೂರು ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಹಟ್ಟಿ ಗುಡದನಾಳ– ಮೇದಿನಾಪೂರ ನಡೆವಿನ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಹಟ್ಟಿ ಪಟ್ಟಣದಿಂದ ಲಿಂಗಸುಗೂರಿಗೆ ಕೋಠಾ ಗ್ರಾಮದ ಮೂಲಕ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.