ಮಾನ್ವಿ: ಪಟ್ಟಣದ ಹೊರವಲಯದ ರಬ್ಬಣಕಲ್ ಬಳಿ ಇರುವ ಕುಡಿಯುವ ನೀರಿನ ಕೆರೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ, ಪುರಸಭೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು.
ಕೆರೆಯಲ್ಲಿ ಸಂಗ್ರಹವಾಗಿರುವ ಕುಡಿಯುವ ನೀರಿನ ಪ್ರಮಾಣ ಪರಿಶೀಲಿಸಿದರು.
ನಂತರ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ, ‘ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾನ್ವಿ ಪಟ್ಟಣದ ಕುಡಿಯುವ ನೀರಿನ ಕೆರೆ ಭರ್ತಿಗಾಗಿ ಎಡದಂಡೆ ನಾಲೆಯ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಒತ್ತಾಯಿಸಿದ್ದೆ. ಕಾರಣ ಕಾಲುವೆ ನೀರು ಹರಿಸಿ ಕೆರೆಯನ್ನು ಭರ್ತಿಗೊಳಿಸಲಾಗಿದೆ. ಪ್ರಸ್ತುತ ಕೆರೆಯಲ್ಲಿ 7.5 ಅಡಿ ಎತ್ತರದ ನೀರು ಸಂಗ್ರಹವಾಗಿದೆ. ಮಾನ್ವಿ ಪಟ್ಟಣದ ಜನತೆಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಸಮರ್ಪಕವಾಗಿ ನೀರು ಪೂರೈಸಬೇಕು’ ಎಂದರು.
‘ಶಾಶ್ವತ ಕುಡಿಯುವ ನೀರಿನ ಯೋಜನೆಯ ಬಾಕಿ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುರಸಭೆಯ ಮುಖ್ಯಾಧಿಕಾರಿ ಜಗದೀಶ ಭಂಡಾರಿ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಎಇಇ ಎ.ಎಚ್.ಚೌಹಾಣ, ರಾಜಾ ರಾಮಚಂದ್ರನಾಯಕ, ಪುರಸಭೆಯ ಸದಸ್ಯರಾದ ಶರಣಪ್ಪ ಮೇದಾ ಹಾಗೂ ಇಬ್ರಾಹಿಂ ಬಾಷಾ, ಶಿವರಾಜ ನಾಯಕ, ಹನುಮಂತ ಭೋವಿ, ಖಲೀಲ್ ಖುರೇಷಿ, ಬಸವರಾಜ ಶೆಟ್ಟಿ, ಮರೇಗೌಡ ಬುದ್ದಿನ್ನಿ, ಗೋಪಾಲನಾಯಕ ಹರವಿ ಹಾಗೂ ಹಂಪನಗೌಡ ನೀರಮಾನ್ವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.