ADVERTISEMENT

ರಾಯಚೂರು: ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಚಿಂತನೆ

ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 15:57 IST
Last Updated 23 ಜೂನ್ 2021, 15:57 IST
ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ವೈ.ಗೋಪಾಲರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು
ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ವೈ.ಗೋಪಾಲರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು   

ರಾಯಚೂರು: ನಗರದ ಸತ್ಯನಾಥ ಕಾಲೋನಿ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಮೂಲನಕ್ಷೆ ಮಾರ್ಪಡಿಸಿ ರಸ್ತೆ, ಉದ್ಯಾನವನಕ್ಕೆ ಮೀಸಲಿಟ್ಟಿರುವ ಸ್ಥಳಗಳಲ್ಲಿ ನಿವೇಶನ ಮಾಡಿ ಮಾರಾಟ ಮಾಡಿ ಅಕ್ರಮವಾಗಿ ಮಾರಾಟ ಮಾಡಲು ಕುಮ್ಮಕ್ಕು ನೀಡಿರುವ ಇಬ್ಬರು ಐಎಎಸ್‌ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವ ಕುರಿತು ರಾಯಚೂರು ನಗರಾಭಿವೃದ್ದಿ ಪ್ರಾಧಿಕಾರ ಸಾಮಾನ್ಯ ಸಭೆಯಲ್ಲಿ ಬುಧವಾರ ಚರ್ಚಿಸಲಾಯಿತು.

ಪ್ರಾಧಿಕಾರದ ಅಧ್ಯಕ್ಷ ವೈ.ಗೋಪಾಲರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸತ್ಯನಾಥಕಾಲೋನಿ ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ದ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು.

ಸತ್ಯನಾಥ ಕಾಲೋನಿಯಲ್ಲಿ ಅಕ್ರಮವಾಗಿ ಲೇಔಟ್ ಮಾಡಿ ಮಾರಾಟ ಮಾಡಿದ್ದಾರೆ ಎಂದು ತಲಕಾಯಿ ಮಾರೆಪ್ಪ ಅವರು ನಗರಾಭಿವೃದ್ದಿ ಇಲಾಖೆಗೆ ದೂರು ನೀಡಿದ್ದರು. ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಈ ಕುರಿತು ಕೂಲಂಕುಷ ಪರಿಶೀಲಿಸಿದ್ದಾರೆ. ಅಕ್ರಮ ಎಸಗಿರುವುದು ಸಾಬೀತಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ. ಈ ಅಕ್ರಮಕ್ಕೆ ಸಹಕಾರ ನೀಡಿದ್ದ ಐಎಎಸ್ ಕೆಲವು ಅಧಿಕಾರಿಗಳು ಮೃತಪಟ್ಟಿದ್ದು, ಕೆಲವರು ನಿವೃತರಾಗಿದ್ದಾರೆ. ಐಎಎಸ್ ಅಧಿಕಾರಿ ಜಿ.ಕುಮಾರನಾಯಕ ಮತ್ತು ನಿವೃತ್ತ ಅಧಿಕಾರಿ ರತ್ನಪ್ರಭ ಅವರು ಮಾತ್ರ ಜೀವಂತವಾಗಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ADVERTISEMENT

ವೈ. ಗೋಪಾಲರೆಡ್ಡಿ ಮಾತನಾಡಿ, ಐಎಎಸ್ ಅಧಿಕಾರಿಗಳು ಆಗಿರುವ ಕಾರಣ ಇವರ ವಿರುದ್ದ ಪ್ರಕರಣ ದಾಖಲಿಸುವ ಬಗ್ಗೆ ಅಂತಿಮವಾಗಿ ಸರ್ಕಾರದಿಂದ ಸೂಕ್ತ ಮಾಹಿತಿ ಪಡೆದು ದೂರು ದಾಖಲಿಸಲಾಗುತ್ತದೆ ಎಂದರು.
ಕಾನೂನು ಸಲಹೆಗಾರ ಎನ್.ಶಿವಶಂಕರ ವಕೀಲ ಮಾತನಾಡಿ, ದೂರು ದಾಖಲಿಸಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸದಸ್ಯ ಶೇಖರ್ ವಾರದ್ ಮಾತನಾಡಿ, ತಾಲೂಕಿನ ಯಕ್ಲಾಸಪೂರು ಗ್ರಾಮದ ಸರ್ವೆ ನಂ. 116,124 ಮತ್ತು 125 ಬಸವೇಶ್ವರ ಸಹಕಾರ ಸಂಘದ ವ್ಯಾಪ್ತಿಯ ನಿವೇಶನ ಸಂಖ್ಯೆ 88, 1-11-38/18 ರಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಅಧ್ಯಕ್ಷ ಗೋಪಾಲರೆಡ್ಡಿ ಮಾತನಾಡಿ, ನಗರದಲ್ಲಿ ಹೊಸದಾಗಿ ಲೇಔಟ್ ನಿರ್ಮಿಸಲು ಕೋರಿ ಅರ್ಜಿ ಸಲ್ಲಿಸುವವರ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ಸ್ಥಳಕ್ಕೆ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಆರ್‌ಡಿಎಗೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಹೇಮಲತಾ ಪಿ.ಬೂದೆಪ್ಪ ಮತ್ತು ಆಯುಕ್ತ ಜಯಪಾಲರೆಡ್ಡಿ ಅವರನ್ನು ಗೌರವಿಸಲಾಯಿತು.

ಸದಸ್ಯೆ ವಾಣಿಶ್ರೀ, ಅಧಿಕಾರಿ ಶರಣಪ್ಪ, ಪ್ರದೀಪ್ ಶಾನಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.