ರಾಯಚೂರು:ಯಾರ ಗುಲಾಮರಾಗುವುದು ಬೇಡ, ಭಗವಂತನ ಗುಲಾಮನಾಗಬೇಕು ಎಂಬ ದಿವ್ಯ ಸಂದೇಶ ಸಾರಿದವರು ಮಹಿಳಾ ದಾಸಿನಿಯರು ಎಂದುಗಂಗಾವತಿ ಸಾಹಿತಿ ಪವನಕುಮಾರ ಗುಂಡೂರು ಹೇಳಿದರು.
ನಗರದ ಟ್ಯಾಗೋರ್ ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಾಸ ಸಾಹಿತ್ಯ ಒಂದು ದಿನದ ಕಾರ್ಯಾಗಾರದಲ್ಲಿ ಒಂದನೇ ಗೋಷ್ಠಿಯಲ್ಲಿ ಮಾತನಾಡಿದರು.ಧಾರ್ಮಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿರಲಿಲ್ಲವೋ, ಅದೇ ಧಾರ್ಮಿಕ ವ್ಯವಸ್ಥೆಯಲ್ಲಿ ಮಹಿಳೆಯು ದೇವರ ಕೀರ್ತನೆಗಳು ರಚಿಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯ ಪಡೆದರು ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಉಪನ್ಯಾಸ ನೀಡಿ, ಅನುಸಂಧಾನ ಇಲ್ಲದೇ ಅಭಿವ್ಯಕ್ತಿ ಸ್ವಾತಂತ್ರ್ಯ ಹೊರಹೊಮ್ಮಲಾಗದು. ಅನುಸಂಧಾನದ ಮುಂದಿನ ಹಂತವೇ ಅಭಿವ್ಯಕ್ತಿಯಾಗಿದೆ.ಮಹಿಳಾ ಹರಿದಾಸರ ಪರಂಪರೆಯಲ್ಲಿಯೇ 108 ರೀತಿಯ ಉಪಾಸನೆಗಳು ಇವೆ. 38 ರೀತಿಯ ಅಭಿವ್ಯಕ್ತಿ ಪ್ರಕಾರಗಳಿದ್ದು, ಅವುಗಳಲ್ಲಿ ದೃಶ್ಯ, ಶ್ರವ್ಯ, ಸಾಂಸ್ಕತಿಕ, ನೃತ್ಯ, ಕಲೆಗಳು ಪ್ರಮುಖವಾಗಿವೆ ಎಂದರು.
ಸೇಡಂನ ನಿವೃತ್ತ ಕನ್ನಡ ಉಪನ್ಯಾಸಕ ಡಾ.ವಾಸುದೇವ ಅಗ್ನಿಹೋತ್ರಿ ಅಧ್ಯಕ್ಷತೆಯಲ್ಲಿ ಪ್ರಥಮ ಗೋಷ್ಠಿ ಜರುಗಿತು.ಎರಡನೇ ಗೋಷ್ಠಿ ಕಲಬುರ್ಗಿಯ ಹಿರಿಯ ಪತ್ರಕರ್ತ ಡಾ.ಶ್ರೀನಿವಾಸ ಸಿರನೂರಕರ್ ಅಧ್ಯಕ್ಷತೆಯಲ್ಲಿ ನಡೆಯಿತು.'ಗಲಗಲಿ ಅವ್ವನವರು' ಕುರಿತು ಸಿಂಧನೂರಿನ ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ, ’ಹೆಳವನಕಟ್ಟೆ ಗಿರಿಯಮ್ಮ’ ಕುರಿತು ಕಲಬುರಗಿಯ ಉಪನ್ಯಾಸಕಿ ಡಾ.ನಿರ್ಮಲಾ ಮಾನೆ ಹಾಗೂ ’ಹರಪನಳ್ಳಿ ಭೀಮವ್ವ ಮತ್ತು ಇತರೆ ಹರಿದಾಸಿನಿಯರು’ ಕುರಿತು ನಗರದ ಉಪನ್ಯಾಸಕಿ ಡಾ.ರಾಜಶ್ರೀ ಕಲ್ಲೂರಕರ್ ಉಪನ್ಯಾಸ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.