ADVERTISEMENT

ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ರಾಯಚೂರಿನಲ್ಲಿ ಪೂರ್ವ ಸಿದ್ಧತೆ

ರಾಯಚೂರು ಜಿಲ್ಲಾ ಕೇಂದ್ರದ ಆರು ಶಾಲಾ ಕ್ಯಾಂಪಸ್‌ಗಳಲ್ಲಿ ವ್ಯವಸ್ಥೆ

ನಾಗರಾಜ ಚಿನಗುಂಡಿ
Published 9 ಜುಲೈ 2020, 19:30 IST
Last Updated 9 ಜುಲೈ 2020, 19:30 IST
ಮೌಲ್ಯಮಾಪನ ಪ್ರಕ್ರಿಯೆಯ ಪ್ರಾತಿನಿಧಿಕ ಚಿತ್ರ
ಮೌಲ್ಯಮಾಪನ ಪ್ರಕ್ರಿಯೆಯ ಪ್ರಾತಿನಿಧಿಕ ಚಿತ್ರ    

ರಾಯಚೂರು: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳನ್ನು ಪ್ರೌಢಶಾಲಾ ಶಿಕ್ಷಕರ ಮೂಲಕ ಜುಲೈ 13 ರಿಂದ ಮೌಲ್ಯಮಾಪನ ಮಾಡಿಸುವುದಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪೂರ್ವ ತಯಾರಿ ಮಾಡಿಕೊಂಡಿದೆ.

ಶಾರದಾ ವಿದ್ಯಾನಿಕೇತನ ಶಾಲೆ, ವಿದ್ಯಾಭಾರತಿ ಶಾಲೆ, ಸೇಂಟ್‌ ಮೇರಿ ಕಾನ್ವೆಂಟ್‌ ಹಾಗೂ ತಾರಾನಾಥ ಶಿಕ್ಷಣ ಸಂಸ್ಥೆಯ ಮೂರು ಕ್ಯಾಂಪಸ್‌ಗಳು ಸೇರಿ ಆರು ಕಡೆಗಳಲ್ಲಿ ಮೌಲ್ಯಮಾಪನ ಮಾಡಿಸಲು ಯೋಜಿಸಲಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನಿತ ರಹಿತ ಪ್ರೌಢಶಾಲೆಗಳಿಂದ ವಿವಿಧ ವಿಷಯಗಳನ್ನು ಬೋಧಿಸುವ ಸುಮಾರು ಒಂದು ಸಾವಿರ ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಬ್ಬರು ಶಿಕ್ಷಕ ಪ್ರತಿದಿನ 20 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ.

ಕೋವಿಡ್‌ ಮುನ್ನಚ್ಚರಿಕೆ: ಕೋವಿಡ್‌ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಲಾಗಿದ್ದು, 55 ವರ್ಷ ಮೇಲ್ಪಟ್ಟು ವಯಸ್ಸಿನ ಶಿಕ್ಷಕರು, ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುವ ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗಿಯಾಗದಿರಲು ಅವಕಾಶ ಮಾಡಲಾಗಿದೆ. ಆದರೆ, ಸ್ವಯಂ ಇಚ್ಛೆ ಇದ್ದರೆ ಹಾಜರಾಗಬಹುದು. ಸೋಂಕು ತಡೆಗಾಗಿ ಮೌಲ್ಯಮಾಪನ ಕೇಂದ್ರಗಳಲ್ಲಿ ಸ್ಯಾನಿಟೈಜೇಷನ್‌, ಮಾಸ್ಕ್‌ ಬಳಕೆ ಮತ್ತು ಸ್ಯಾನಿಟೈಜರ್‌ ಬಳಸುವುದಕ್ಕೆ ಸೂಚನೆ ನೀಡಲಾಗಿದೆ.

ADVERTISEMENT

ವಾಹನ ವ್ಯವಸ್ಥೆ: ಈ ಬಾರಿ ಮೌಲ್ಯಮಾಪನಕ್ಕೆ ಬರುವ ಶಿಕ್ಷಕರು ಕೋವಿಡ್‌ ಹಿನ್ನೆಲೆಯಲ್ಲಿ ಮೌಲ್ಯಮಾಪನ ನಡೆಯುವ ಜಿಲ್ಲಾ ಕೇಂದ್ರದಲ್ಲಿಯೇ ಉಳಿದುಕೊಳ್ಳುವುದನ್ನು ಕಡ್ಡಾಯ ಮಾಡಿಲ್ಲ. ತಾಲ್ಲೂಕು ಕೇಂದ್ರಗಳಿಂದ ಶಿಕ್ಷಕರನ್ನು ಕರೆತರುವುದು ಮತ್ತು ವಾಪಸ್‌ ತಲುಪಿಸುವುದಕ್ಕೆ ವ್ಯವಸ್ಥೆ ಆಗಿದೆ. ಇದಕ್ಕಾಗಿ ಖಾಸಗಿ ಶಾಲಾ ವಾಹನಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್‌. ಗೋನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.