ಮಸ್ಕಿ: ತಾಲ್ಲೂಕಿನ ಉಸ್ಕಿಹಾಳದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ಜನರು ತಮ್ಮ ಗ್ರಾಮದ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಜಿಲ್ಲಾಧಿಕಾರಿ ಅವಿನಾಶ್ ಮೇನನ್ ಅವರಿಗೆ ಸಲ್ಲಿಸಿದರು.
ಪಹಣಿ ಪಡೆಯಲು ಕಾಟಗಲ್ ಗ್ರಾಮದ ಹತ್ತು ಜನರು ಹತ್ತು ವರ್ಷಗಳಿಂದ ಅಲೆದಾಡುತ್ತಿದ್ದೇವೆ. ಇನ್ನೂ ಪಹಣಿ ಪತ್ರ ದೊರಕಿಲ್ಲ. ನಮಗೆ ಮಜಣಿ ಪತ್ರ ಕೊಡಿ ಎಂದು ಕಾಟಗಲ್ ಗ್ರಾಮದ ರೈತ ರಾಜಸಾಬ್ ಮನವಿ ಮಾಡಿದರು.
ದೇವದಾಸಿ ಮಹಿಳೆಯರಿಗೆ ಮಾಶಾಸನ ಒದಗಿಸಲು ಸಮಸ್ಯೆ ಇದೆ. ಈ ಸಮಸ್ಯೆ ನೀವಾರಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ದೇವದಾಸಿ ವಿಮೋಚನ ಸಂಘಟನೆಯ ಅಧ್ಯಕ್ಷೆ ರತ್ನಮ್ಮ ಆಗ್ರಹಿಸಿದರು.
ಪೈಗಂಬರ್ ನಗರದಲ್ಲಿ 60 ಗುಂಪು ಮನೆಗಳು ಇದ್ದು ಅವುಗಳಿಗೆ ವಿದ್ಯುತ್ ಇಲ್ಲ, ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಫಲಾನುಭವಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲು ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ವಿಠ್ಠಲ ಕೇರೂರು ಸೇರಿದಂತೆ ಬಂಜಾರು ಸಮಾಜದ ಮುಖಂಡರು ಒತ್ತಾಯಿಸಿದರು.
ಬುದ್ದಿನ್ನಿ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮುಂಜೂರು ಮಾಡಬೇಕು ಎಂದು ಗ್ರಾಮದ ದೇವರೆಡ್ಡಿ ಬುದ್ದಿನ್ನಿ ಒತ್ತಾಯಿದರು. ಮುದಬಾಳ ಕ್ರಾಸ್ ಮೂಲಕ ನೂರಾರು ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಬೇರೆ ಬೇರೆ ಊರಿಗೆ ಹೋಗುತ್ತಾರೆ. ಆದರೆ ಇಲ್ಲಿ ಬಸ್ ನಿಲುಗಡೆ ಇಲ್ಲದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಾಟಗಲ್ ಗ್ರಾಮದ ಶರಣಗೌಡ ಹಾಗೂ ನಾಗಿರೆಡ್ಡಿ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಉಸ್ಕಿಹಾಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು ಹಾಗೂ ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ಮುಂಜೂರು ಮಾಡವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸಭೆಯಲ್ಲಿ 150ಕ್ಕೂ ಅರ್ಜಿಗಳು ಸಲ್ಲಿಕೆಯಾದವು.
ಪ್ರತಿಯೊಂದು ಅರ್ಜಿದಾರರಿಂದ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಅವಿನಾಶ್ ಮೇನನ್ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಾಸಕ ಆರ್. ಬಸನಗೌಡ, ಜಿಲ್ಲಾ ಪಂಚಾಯತಿ ಸಿಇಒ ಸೇರಿದಂತೆ ಜಿಲ್ಲಾ ಜನ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.