ರಾಯಚೂರು: ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಶ್ರೀ ಅಪ್ಪಣ್ಣಾ ಚಾರ್ಯ ಸೇವಾ ಟ್ರಸ್ಟ್ನಿಂದ ಈಗಾಗಲೇ ಅಭಿವೃದ್ಧಿಪಡಿಸಿದ ಸರ್ವೆ ಸಂಖ್ಯೆ 35 ಮತ್ತು 37 ಸರ್ಕಾರಿ ಜಾಗ 2.23 ಎಕರೆ ಮಂತ್ರಾಲಯ ಮಠಕ್ಕೆ ಹಂಚಿಕೆ ಮಾಡಲು ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿರುವುದಕ್ಕೆ ಟ್ರಸ್ಟ್ ಆಕ್ಷೇಪ ಎತ್ತಿದ್ದು, ಈ ಬಗ್ಗೆ ಸರ್ಕಾರದ ವಿರುದ್ಧ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಮುಖ್ಯಸ್ಥರಾದ ಕೃಷ್ಣಾಚಾರ್ಯ ಬಾಡದ ಹಾಗೂ ಪವನಾ ಚಾರ್ಯ ಬಾಡದ್ ಅವರು, ಅಪ್ಪಣಾಚಾರ್ಯರ ಏಕಶಿಲಾ ವೃಂದಾವನದ ಬಳಿಯ ಜಮೀನನ್ನು ಅನೇಕ ವರ್ಷಗಳಿಂದ ಅಭಿವೃದ್ಧಿ ಮಾಡಲಾಗಿದೆ.
ಜಾಗದ ಮಂಜೂರಾತಿ ಕೋರಿ ಸಂಬಂಧಿಸಿದ ಅಧಿಕಾರಿಗಳಿಗೆ 2006 ರಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದುವರೆಗೂ ಮೌನವಹಿಸಿದ್ದ ಸರ್ಕಾರ, ಈಗ ಅನುಮೋದನೆ ನೀಡಿದೆ. ಸಚಿವ ಸಂಪುಟದ ನಿರ್ಧಾರವನ್ನು ಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದರು.
ಬಿಚ್ಚಾಲೆಯಲ್ಲಿ ಮಂತ್ರಾಲಯ ಮಠದ ಮೃತ್ತಿಕಾ ವೃಂದಾವನ ಇಲ್ಲ. ಅಪ್ಪಣಾಚಾರ್ಯರು ನೂರಾರು ವರ್ಷಗಳ ಹಿಂದೆ ಸ್ಥಾಪಿಸಿರುವ ವೃಂದಾವನವಿದೆ. ಇದು ವಂಶಸ್ಥರಿಂದ ಪೂಜಿತವಾದ ಸ್ಥಳವಾಗಿದೆ. ಇದರ ಮೇಲೆ ಮಂತ್ರಾಲಯ ಮಠದ ಅಧಿಕಾರ ಇಲ್ಲ. ಮಠದಿಂದ ಬಿಚ್ಚಾಲೆ ವೃಂದಾವನವನ್ನು ಕಬಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.