ರಾಯಚೂರು: ಆಕಸ್ಮಿಕವಾಗಿ ಸಾವನ್ನಪ್ಪುವ ಕುರಿ ಮತ್ತು ಮೇಕೆಗಳಿಗೆ ಪರಿಹಾರ ನೀಡುವ ಯೋಜನೆಗೆ ಅನುದಾನ ನೀಡಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕುರಿಗಾರರು ಮತ್ತು ಕುರಿ ಸಾಕಣೆದಾರರ ಸಹಕಾರ ಸಂಘಗಳು ಹಾಗೂ ರಾಜ್ಯ ಮಹಾ ಮಂಡಳದ ಪದಾಧಿಕಾರಿಗಳ ನೇತೃತ್ವದಲ್ಲಿ ಕುರಿಗಾಹಿಗಳು ಜಿಲ್ಲಾ ಪಶು ವೈದ್ಯಕೀಯ ಸೇವಾ ಇಲಾಖೆಯ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಯಾವುದೇ ಕಾರಣ ರೋಗಗಳಿಂದ ಸಾವನ್ನಪ್ಪಿದ ಕುರಿಗಳಿಗೆ ಮರಿಗಳಿಗೆ ₹2,500 ಹಾಗೂ ಕುರಿಮೇಕೆಗಳಿಗೆ ₹5,000 ಪರಿಹಾರ ನೀಡಲಾಗುತ್ತಿದ್ದು ಪ್ರಸ್ತುತ ರಾಜ್ಯ ಸರ್ಕಾರ ಯೋಜನೆಗೆ ಅನುದಾನ ನೀಡದೇ ಸ್ಥಗಿತಗೊಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016–17ರಲ್ಲಿ ರಾಜ್ಯ ಕುರಿಗಾರರ ಅಭಿವೃದ್ಧಿಗಾಗಿ ರಾಜ್ಯ ಸಹಕಾರ ಕುರಿ ಮೇಕೆ ಸಾಕಣೆದಾರರ ಸಂಘಗಳ ಮಹಾ ಮಂಡಳಿ ಸ್ಥಾಪಿಸಿ ಅನುದಾನ ನೀಡಿದ್ದರು. ಎರಡು ವರ್ಷಗಳಿಂದ ಸರ್ಕಾರ ಅನುದಾನ ನೀಡದೇ ಮಹಾಮಂಡಳ ಹಾಕಿಕೊಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಗುತ್ತಿಲ್ಲ ಎಂದು ತಿಳಿಸಿದರು.
ರಾಜ್ಯ ಕುರಿಗಾರರ ಆರ್ಥಿಕ ಸ್ಥಿತಿ ಸುಧಾರಿಸಲು 25,000 ಕುರಿ ಸಾಕಾಣಿಕೆ ಘಟಕಗಳನ್ನು ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಸಂಘಗಳ ಸದಸ್ಯರಿಗೆ ಎನ್ಸಿಡಿಸಿ ಯೋಜನೆಯಡಿ ₹187 ಕೋಟಿ ಆರ್ಥಿಕ ನೆರವು ಪಡೆಯಲು ಖಾತ್ರಿ ನೀಡಲು ಬೃಹತ್ ಯೋಜನೆ 2018–19 ಸಾಲಿನಲ್ಲಿ ಬಜೆಟ್ನಲ್ಲಿ ಘೋಷಣೆಯಾಗಿತ್ತು. ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಬೇಕು. ಕುರಿಗಾರರಿಗೆ ಜೀವನೋಪಾಯಕ್ಕೆ ಕುರಿಗಳನ್ನು ಮೇಯಿಸಲು ಅರಣ್ಯ ಪ್ರದೇಶದಲ್ಲಿ ಅರಣ್ಯಕ್ಕೆ ಹಾಣಿಯಾಗದಂತೆ ಮೇಯಿಸಲು ಅನುಮತಿ ನೀಡಬೇಕು. ಶೂನ್ಯ ಬಡ್ಡಿದರದಲ್ಲಿ ಕುರಗಾರರಿಗೆ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಕುರಿ ಸಾಕಣೆದಾರರ ಸಹಕಾರ ಸಂಘಗಳು ಹಾಗೂ ರಾಜ್ಯ ಮಹಾ ಮಂಡಳದ ಅಧ್ಯಕ್ಷ ಪಂಡಿತ್ ರಾವ್ ಚಿದ್ರಿ, ನಿರ್ದೇಶಕ ಶಾಂತಗೌಡ ಮಾಲಿ ಪಾಟೀಲ, ಕುರುಬರ ಸಮಾಜದ ಮುಖಂಡ ವಿರೂಪಾಕ್ಷಪ್ಪ ಮತ್ತಿತರರು ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.