ADVERTISEMENT

'ಆಧಾರ್' ನೋಂದಣಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 13:24 IST
Last Updated 21 ಜುಲೈ 2019, 13:24 IST
ಮಾಗಡಿಯ ಅಂಚೆ ಕಚೇರಿ ಮುಂದೆ ಆಧಾರ್‌ ನೋಂದಣಿಗೆ ನೂಕು ನುಗ್ಗಲು ಉಂಟಾಗಿರುವುದು
ಮಾಗಡಿಯ ಅಂಚೆ ಕಚೇರಿ ಮುಂದೆ ಆಧಾರ್‌ ನೋಂದಣಿಗೆ ನೂಕು ನುಗ್ಗಲು ಉಂಟಾಗಿರುವುದು   

ಮಾಗಡಿ: ಇಲ್ಲಿನ ಅಂಚೆ ಕಚೇರಿ ಬಳಿ ಆಧಾರ್‌ ಕಾರ್ಡ್‌ ನೋಂದಣಿ ಮಾಡಿಸಲುನಿತ್ಯ ನೂಕುನುಗ್ಗಲು ಉಂಟಾಗುತ್ತಿದೆ ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬ್ಯಾಲಕೆರೆ ಚಿಕ್ಕರಾಜು ತಿಳಿಸಿದ್ದಾರೆ.

‘ಶನಿವಾರ ಅಂಚೆ ಕಚೇರಿ ಬಳಿ ಮೈಲಿ ಉದ್ದದ ಸಾಲಲ್ಲಿ ನಿಂತು ಬಸವಳಿದ ಸಾರ್ವಜನಿಕರು, ಅಂಚೆ ಕಚೇರಿ ನೌಕರರೊಂದಿಗೆ ವಾಗ್ವಾದ ನಡೆಸಿದರು. ತಹಶೀಲ್ದಾರ್‌ ಮತ್ತು ಪುರಸಭೆಯಲ್ಲಿರುವ ನೋಂದಣಿ ಕೇಂದ್ರಗಳಲ್ಲಿ ನಿತ್ಯ ಇಂಟರ್ನೆಟ್‌, ಸರ್ವರ್‌ ತೊಂದರೆಯಿಂದ ನಾಲ್ಕಾರು ಜನರ ಆಧಾರ್‌ ನೋಂದಣಿಯೇ ಆಗುತ್ತಿಲ್ಲ’ ಎಂದು ಹೇಳಿದರು.

‘ನೋಂದಣಿಗಾಗಿ ಜನರು ಬೆಳಿಗ್ಗೆ 9 ಗಂಟೆಯಿಂದ ಇಡೀ ದಿನ ಕಾಯಬೇಕಿದ್ದು, ನೂಕು ನುಗ್ಗಲು ಉಂಟಾಗುತ್ತಿದೆ. ಅಂಚೆ ಕಚೇರಿಯಲ್ಲಿನ ಸಿಬ್ಬಂದಿ ಕೊರತೆ, ಇಲಾಖೆಯ ಕೆಲಸ–ಕಾರ್ಯಗಳೇ ಬೇಕಾದಷ್ಟು ಇರುವಾಗ ಆಧಾರ್‌ ನೋಂದಣಿ ಅಂಚೆ ಕಚೇರಿಗೆ ವಹಿಸಿದ್ದು ಅವೈಜ್ಞಾನಿಕವಾಗಿದೆ’ ಎಂದು ಅವರು ದೂರಿದರು.

ADVERTISEMENT

‘ಪುರಸಭೆ ಕಂದಾಯ ಅಧಿಕಾರಿಗಳು ಮನೆ ಮನೆಗೆ ತೆರಳಿ, ಬಡಾವಣೆಯಲ್ಲಿ ಮೊಕ್ಕಾಂ ಹೂಡಿ ಜನರಿಗೆ ಆಧಾರ್‌ ಕಾರ್ಡ್‌ ನೋಂದಣಿ ಮಾಡಿಸಲು ಮುಂದಾಗಬೇಕು. ಜನರ ಸಮಸ್ಯೆ ಪರಿಹರಿಸಲು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ತಹಶೀಲ್ದಾರ್‌ ಕಚೇರಿ ಎದುರು ಸಾರ್ವಜನಿಕರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.