ADVERTISEMENT

ಚಿನ್ನ ಪಾಲಿಶ್‌ ನೆಪದಲ್ಲಿ ವಂಚನೆ ಆರೋಪ

ಆರೋಪಿಗಳನ್ನು ಹಿಡಿದುಕೊಟ್ಟ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 6:03 IST
Last Updated 31 ಜುಲೈ 2022, 6:03 IST
ಘಟನಾ ಸ್ಥಳದಲ್ಲಿ ನೆರೆದ ಗ್ರಾಮಸ್ಥರು
ಘಟನಾ ಸ್ಥಳದಲ್ಲಿ ನೆರೆದ ಗ್ರಾಮಸ್ಥರು   

ರಾಮನಗರ: ಚಿನ್ನ ಪಾಲಿಶ್‌ ಮಾಡುವ ನೆಪದಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕದಿಯುತ್ತಿದ್ದ ಇಬ್ಬರು ಕದೀಮರನ್ನು ಗ್ರಾಮಸ್ಥರೇ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ತಾಲೂಕಿನ ಕೆ.ಜಿ. ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಪ್ರಕರಣ ಸಂಬಂಧ ಒಡಿಶಾ ಮೂಲದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಇಬ್ಬರು ಆರೋಪಿಗಳು ಗ್ರಾಮದ ಸುಧಾ ಎಂಬ ಮಹಿಳೆ ಮನೆ ಹತ್ತಿರ ಹೋಗಿ ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಬಿಚ್ಚಿಸಿಕೊಂಡು, ಪಾಲಿಶ್‌ ಮಾಡಿದ್ದಾಗಿ ಹೇಳಿ ವಾಪಸ್‌ ಒಡವೆ ಕೊಟ್ಟು ಹೋಗಿದ್ದಾರೆ. ನಂತರದಲ್ಲಿ ಸರದ ತೂಕ ನೋಡಿ ಮಹಿಳೆಗೆ ಅನುಮಾನ ಬಂದಿದೆ. ಅದನ್ನು ಆಕೆ ಪಕ್ಕದ ಮನೆಯವರಿಗೆ ತಿಳಿಸಿದ್ದಾರೆ.

‘ನಾನು ಮನೆ ಮುಂದೆ ಇರಬೇಕಾದರೆ ಇಬ್ಬರು ಬಂದು ಪೌಡರ್ ಕೊಟ್ಟು ಚಿನ್ನಕ್ಕೆ ತಿಕ್ಕಿ ಒಳಪು ಬರುತ್ತದೆ ಎಂದರು. ಪೌಡರ್ ತೆಗೆದುಕೊಂಡೆ ನಂತರ ನನಗೆ ಮಂಕು ಕವಿದಂತೆ ಆಗಿ ಚಿನ್ನದ ಸರ ಬಿಚ್ಚಿ ಕೊಟ್ಟೆ. ಅವರು ಅದನ್ನು ನೀರಿನಲ್ಲಿ ಅದ್ದಿ ಕೊಟ್ಟು ತಕ್ಷಣವೇ ಹೊರಟು ಹೋದರು. ಆದರೆ ನನಗೆ ಚಿನ್ನದ ತೂಕದಲ್ಲಿ ಅನುಮಾನ ಬಂದು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದೆ. ಮಾಂಗಲ್ಯಸರ, ತಾಳಿ, ಗುಂಡು, ಕಾಸು ಸೇರಿ ಸುಮಾರು 50 ಗ್ರಾಂ ಚಿನ್ನವಿತ್ತು. ನಂತರ ತೂಕ ಹಾಕಿಸಿದರೆ 37 ಗ್ರಾಂ ಚಿನ್ನಕ್ಕೆ ಬಂದು ನಿಂತಿದೆ’ ಎಂದು ಸುಧಾ ಆರೋಪಿಸಿದರು.

ADVERTISEMENT

ಚಿನ್ನದ ತೂಕದಲ್ಲಿ ವ್ಯತ್ಯಾಸ ಆದ ಕಾರಣ ಗ್ರಾಮಸ್ಥರು ಎಚ್ಚೆತ್ತು ಇಬ್ಬರನ್ನು ಹುಡುಕಾಡಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗೆ ಫೊನಾಯಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಆಗಲೇ ಸಬ್ಬಕೆರೆ ಗ್ರಾಮದಲ್ಲಿ ಹೋಗುತ್ತಿರುವ ವಿಷಯ ತಿಳಿದು ಸಬ್ಬಕೆರೆಗೆ ತೆರಳಿ, ಇಬ್ಬರನ್ನು ಎಳೆದು ಗ್ರಾಮಕ್ಕೆ ತಂದು ಪೊಲೀಸನವರಿಗೆ ವಿಷಯ
ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ರಾಮಚಂದ್ರಯ್ಯ ಹಾಗೂ ಗ್ರಾಮಸ್ಥರ ನಡುವೆ ವಾಗ್ದಾದ ನಡೆಯಿತು. ಎಸ್ಪಿ ಅವರೇ ಗ್ರಾಮಕ್ಕೆ ಬರುವಂತೆ ಜನರು ಪಟ್ಟು ಹಿಡಿದರು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು
ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.