ADVERTISEMENT

ಕನಕಪುರ | ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಅಡ್ಡಿ: ಸಿಡಿಪಿಒ ಭೇಟಿ

ಜಾಗದ ವಿಷಯವಾಗಿ ಗ್ರಾಮಸ್ಥರ ನಡುವೆ ಗೊಂದಲ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 2:18 IST
Last Updated 5 ಸೆಪ್ಟೆಂಬರ್ 2025, 2:18 IST
ಕನಕಪುರ ಛತ್ರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಬಗ್ಗೆ ಗ್ರಾಮಸ್ಥರೊಂದಿಗೆ ಪಿಡಿಒ ಮುನಿಯಪ್ಪ, ಸಿಡಿ ಪಿಒ ನಾರಾಯಣ್ ಮಾತುಕತೆ ನಡೆಸಿದರು
ಕನಕಪುರ ಛತ್ರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಬಗ್ಗೆ ಗ್ರಾಮಸ್ಥರೊಂದಿಗೆ ಪಿಡಿಒ ಮುನಿಯಪ್ಪ, ಸಿಡಿ ಪಿಒ ನಾರಾಯಣ್ ಮಾತುಕತೆ ನಡೆಸಿದರು   

ಕನಕಪುರ: ತಾಲ್ಲೂಕಿನ ಛತ್ರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಪಂಚಾಯಿತಿ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬೆಂಗಳೂರು ಹೆದ್ದಾರಿಯಲ್ಲಿ ಗ್ರಾಮ ಇದ್ದು ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ, ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಪುಟ್ಟ ಕೊಠಡಿಯಲ್ಲಿ ನಡೆಯುತ್ತಿದೆ.

ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಬೇಕೆಂಬ ಗ್ರಾಮಸ್ಥರ ಕೋರಿಕೆ ಮೇರೆಗೆ ಜಿಲ್ಲಾ ಪಂಚಾಯಿತಿಯಿಂದ ಹಣ ಮಂಜೂರಾಗಿದೆ. ಎರಡು ಮೂರು ವರ್ಷವಾದರೂ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡದೆ ವಿಳಂಬವಾದ ಕಾರಣ ಜಿಲ್ಲಾ ಪಂಚಾಯಿತಿ ಸಿಇಒ, ಶೀಘ್ರ ಹಣ ಬಳಕೆ ಮಾಡಿ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡುವಂತೆ ಸೂಚಿಸಿದ್ದಾರೆ. ಇಲ್ಲವಾದ್ದಲ್ಲಿ ಹಣವನ್ನು ವರ್ಗಾಯಿಸಿ ಅವಶ್ಯ ಇರುವ ಕಡೆ ಕೇಂದ್ರ ನಿರ್ಮಿಸಿ ಎಂದು ಪತ್ರ ಬರೆದಿದ್ದಾರೆ.

ADVERTISEMENT

ಸಿಇಒ ಸೂಚನೆ ಮೇರೆಗೆ ಗ್ರಾಮ ಪಂಚಾಯಿತಿ ಪಿಡಿಒ ಮುನಿಯಪ್ಪ ಮತ್ತು ಸಿಡಿಪಿಒ ನಾರಾಯಣ್ ಛತ್ರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಅಂಗನವಾಡಿ ಕೇಂದ್ರ ನಿರ್ಮಾಣ ಸಂಬಂಧ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

ಗ್ರಾಮದ ಹಿರಿಯ ಮುಖಂಡರು ಸರ್ಕಾರ ಗುರುತು ಮಾಡಿರುವ ಜಾಗದಲ್ಲಿ ಅಂಗನವಾಡಿ ನಿರ್ಮಿಸಬೇಕೆಂದು ಸಲಹೆ ನೀಡಿದರು. 

ಆದರೆ, ಗ್ರಾಮದ ಯುವಕರು ಈ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಬೇಕು. ಬೇರೆ ಕಡೆ ಜಾಗ ಗುರುತಿಸಿ ಅಲ್ಲಿ ಕಟ್ಟಡ ನಿರ್ಮಿಸಿ ಎಂದು ಹೇಳಿದ್ದಾರೆ. ಮತ್ತೊಮ್ಮೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಕಟ್ಟಡ ನಿರ್ಮಾಣ ಬಗ್ಗೆ ತೀರ್ಮಾನ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಸಭೆ ಮುಕ್ತಾಯಗೊಳಿಸಿದ್ದಾರೆ.

ಅಂಗನವಾಡಿ ಕೇಂದ್ರ ಸದ್ಯಕ್ಕೆ ಒಂದು ಚಿಕ್ಕದಾದ ಬಾಡಿಗೆ ಕೊಠಡಿಯಲ್ಲಿ ನಡೆಯುತ್ತಿದೆ. ಮಕ್ಕಳನ್ನು ಪಡಶಾಲೆಯಲ್ಲಿ ಕೂರಿಸಿ ಕಲಿಸಲಾಗುತ್ತಿದೆ. ಕೊಠಡಿ ಒಳಗಡೆ ಮಕ್ಕಳಿಗೆ ತಿಂಡಿ ತಯಾರು ಮಾಡಲಾಗುತ್ತಿದೆ. 

ಕಟ್ಟಡ ನಿರ್ಮಾಣದ ಜಾಗದ ಬಗ್ಗೆ ಸ್ವಲ್ಪ ಸಮಸ್ಯೆ ಇದೆ. ಇದನ್ನು ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಶೀಘ್ರ ಕಟ್ಟಡ ನಿರ್ಮಾಣ ಮಾಡಲಾಗುವುದು
ಮುನಿಯಪ್ಪ ಪಿಡಿಒ ತುಂಗಣಿ ಗ್ರಾಮ ಪಂಚಾಯಿತಿ
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರಾಗಿ ಮೂರು ವರ್ಷವಾಗಿದೆ. ಸಿಇಒ ಸೂಚನೆ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಾಗಿದೆ
ನಾರಾಯಣ್ ಸಿಡಿಪಿಒ ಕನಕಪುರ
ಸುಸಜ್ಜಿತವಾದ ಕಟ್ಟಡ ಇದ್ದರೆ ಇನ್ನು ಹೆಚ್ಚಿನ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಪೋಷಕರು ಸೇರಿಸುತ್ತಾರೆ. ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಅವಶ್ಯ ಇದೆ
ಗಾಯತ್ರಿ ಅಂಗನವಾಡಿ ಕಾರ್ಯಕರ್ತೆ
ಗರ್ಭಿಣಿಯರು ಬಾಣಂತಿಯರು ಮತ್ತು ಮಕ್ಕಳ ಪೋಷಣೆ ಶಿಶು ವಿಹಾರಕ್ಕೆ ಅನುಕೂಲವಾಗಲಿದೆ. ಗ್ರಾಮಸ್ಥರೆಲ್ಲರೂ ಒಟ್ಟಾಗಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸಹಕಾರ ನೀಡಬೇಕು
ಶಿವಣ್ಣ ಗ್ರಾಮದ ಹಿರಿಯ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.