ADVERTISEMENT

ರಾಮನಗರ| ಎಟಿಎಂ ಕಾರ್ಡ್ ಪಡೆದು ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 5:19 IST
Last Updated 17 ಫೆಬ್ರುವರಿ 2023, 5:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಎಟಿಎಂಗಳಲ್ಲಿ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಜನರ ಗಮನ ಬೇರೆಡೆ ಸೆಳೆದು ಅವರ ಎಟಿಎಂ ಕಾರ್ಡ್‌ ಹಾಗೂ ಪಿನ್‌ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರ ನಿವಾಸಿ ತಿಮ್ಮ ಅಲಿಯಾಸ್‌ ವೆಂಕಟರಾಮ (38) ಹಾಗೂ ಮಾಲೂರು ಪಟ್ಟಣದ ಮಾರುತಿ ಎಕ್ಸ್‌ಟೆನ್ಶನ್‌ ಬಡಾವಣೆ ನಿವಾಸಿ ಟಿ. ಮಂಜುನಾಥ (37) ಬಂಧಿತರು. ಇವರಿಂದ ವಿವಿಧ ಬ್ಯಾಂಕುಗಳ 20 ಎಟಿಎಂ ಕಾರ್ಡುಗಳು, ₹50 ಸಾವಿರ ನಗದು 2 ಮೊಬೈಲ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಿವಿಧ ಗ್ರಾಹಕರಿಗೆ ಹೀಗೆ ವಂಚಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ರಾಮನಗರದ ಯೂನಿಯನ್‌ ಬ್ಯಾಂಕ್‌ನ ಎಟಿಎಂನಲ್ಲಿ ಇದೇ ತಿಂಗಳ 9ರಂದು ಅರಳಿಮರದದೊಡ್ಡಿ ನಿವಾಸಿ ಶಾಂತಮ್ಮ ಎಂಬುವರು ಹಣ ಡ್ರಾ ಮಾಡಲು ಬಂದಿದ್ದರು. ಈ ಸಂದರ್ಭ ಆರೋಪಿಗಳು ಮಹಿಳೆಗೆ ಹಣ ಡ್ರಾ ಮಾಡಿಕೊಳ್ಳಲು ಸಹಾಯ ಮಾಡುವಂತೆ ನಟಿಸಿ, ಆಕೆಯ ಎಟಿಎಂ ಕಾರ್ಡ್‌, ಪಿನ್‌ ಪಡೆದು ಅದರ ಬದಲಿಗೆ ಮತ್ತೊಂದು ಎಟಿಎಂ ಕಾರ್ಡ್‌ ನೀಡಿದ್ದರು. ಬಳಿಕ, ಈ ಎಟಿಎಂನಲ್ಲಿ ಹಣ ಬರುತ್ತಿಲ್ಲ. ಮತ್ತೊಂದು ಎಟಿಎಂಗೆ ಹೋಗಿ ಎಂದು ಮಹಿಳೆಗೆ ಹೇಳಿ ಕಳುಹಿಸಿದ್ದರು. ಬಳಿಕ ಶಾಂತಮ್ಮ ಅವರ ಎಟಿಎಂ ಕಾರ್ಡ್ ಬಳಸಿ ₹12 ಸಾವಿರ ಡ್ರಾ ಮಾಡಿಕೊಂಡು ವಂಚಿಸಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಎಟಿಎಂ ಕೇಂದ್ರಗಳಲ್ಲಿ ಅಪರಿಚಿತರಿಗೆ ತಮ್ಮ ಕಾರ್ಡ್‌, ಪಿನ್‌ ಸಂಖ್ಯೆ ಸೇರಿದಂತೆ ಯಾವುದೇ ಮಾಹಿತಿಗಳನ್ನು ಸಾರ್ವಜನಿಕರು ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.