ಕನಕಪುರ: ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರು ಕಟಾವು ಮಾಡಿ ಮೆದೆಮಾಡಿದ್ದ ರಾಗಿಯನ್ನು ನಾಶ ಮಾಡಿರುವುದು ಅಲಗಡಕಲು ಮತ್ತು ಚಾಮುಂಡಿಪುರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿದ್ದ ಜೋರು ಮಳೆಗೆ ಸಿಲುಕಿ ಸಾಕಷ್ಟು ರಾಗಿಬೆಳೆ ನಾಶವಾಗಿತ್ತು. ಮಳೆ ನಿಂತಮೇಲೆ ಅಳಿದುಳಿದ
ರಾಗಿಬೆಳೆಯನ್ನು ನಾಲ್ಕೈದು ದಿನಗಳ ಹಿಂದೆ ಕಟಾವು ಮಾಡಿದ್ದ ರೈತರು ಮೆದೆಮಾಡಿದ್ದರು.
ಶುಕ್ರವಾರ ರಾತ್ರಿ ಸುಮಾರು 20 ಆನೆಗಳ ಹಿಂಡು ಮೊದಲು ಅಲಗಡಕಲು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಿವ ಎಂಬುವರು 2 ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ಧ್ವಂಸಗೊಳಿಸಿವೆ.
ನಂತರ ಪಕ್ಕದಲ್ಲೇ ಇದ್ದ ಚಾಮುಂಡಿಪುರ ಗ್ರಾಮದಲ್ಲಿ ದಾಳಿ ನಡೆಸಿ ಸಿದ್ದೇಶ್ನಾಯ್ಕ್ ಎಂಬುವರು 4 ಎಕರೆಯಲ್ಲಿ ಬೆಳೆದಿದ್ದ ರಾಗಿಮೆದೆ ಮತ್ತು ನಾಗರಾಜಯ್ಯ ಅವರ 2 ಎಕರೆಯ ರಾಗಿ ಮೆದೆಯನ್ನು ನಾಶಗೊಳಿಸಿ ಬೆಳಗಾಗುವುದರಲ್ಲಿ ಕಾಡಿಗೆ ಹೊರಟು ಹೋಗಿವೆ.
ಬೆಳಿಗ್ಗೆ ರೈತರು ಜಮೀನಿನ ಕಡೆ ಹೋದಾಗ ಕಾಡಾನೆ ದಾಳಿನಡೆಸಿ ರಾಗಿಮೆದೆ ನಾಶಮಾಡಿರುವುದು ಗೊತ್ತಾಗಿದೆ. ತಕ್ಷಣವೇ ಸಂತ್ರಸ್ತ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಬೆಳೆ ಪರಿಹಾರಕ್ಕೆ ಅರ್ಜಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ವರದಿ ಪಡೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.