ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ರಾಮನಗರ: ನಗರದ ರಂಗರಾಯರದೊಡ್ಡಿಯಲ್ಲಿರುವ ಎಂಎಸ್ಬಿ ಬ್ರಿಕ್ಸ್ ಕಾರ್ಖಾನೆಯಲ್ಲಿ ಒಡಿಶಾ ಮೂಲದ 7 ಮಂದಿಯನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಾ ಶೋಷಿಸಲಾಗುತ್ತಿದೆ ಆರೋಪದ ಮೇರೆಗೆ, ಸರ್ಕಾರೇತರ ಸಂಸ್ಥೆ ಮುಕ್ತಿ ಒಕ್ಕೂಟದ ಸದಸ್ಯರು ಕಾರ್ಖಾನೆಗೆ ತೆರಳಿ ಇತ್ತೀಚೆಗೆ ಕಾರ್ಮಿಕರನ್ನು ರಕ್ಷಿಸಿದ್ದಾರೆ.
ಕಾರ್ಮಿಕರನ್ನು ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದ ಆರೋಪದ ಮೇರೆಗೆ ಕಾರ್ಖಾನೆ ಮಾಲೀಕ ರಂಗರಾಯರದೊಡ್ಡಿಯ ಶಾರಿಕ್ ಷರೀಫ್ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಕುಟುಂಬಗಳಿಗೆ ಸೇರಿದ ಈ ಕಾರ್ಮಿಕರಲ್ಲಿ ಇಬ್ಬರು ಮಕ್ಕಳು, ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರಿದ್ದಾರೆ. ಇವರೆಲ್ಲರೂ ಒಡಿಶಾದ ಬಲಾಂಗಿರ್ ಜಿಲ್ಲೆಯವರು.
ಹಲ್ಲೆ: ಕಾರ್ಮಿಕರಿಗೆ ಆರು ತಿಂಗಳಿಂದ ವೇತನ ನೀಡದ ಮಾಲೀಕ ಶಾರಿಕ್, ಕೆಟ್ಟದಾಗಿ ನಿಂದಿಸುತ್ತಿದ್ದ. ಕೆಲಸ ಬಿಟ್ಟು ಊರಿಗೆ ಹೋಗುತ್ತೇವೆಂದರೂ ಬಿಡುತ್ತಿರಲಿಲ್ಲ. ಬೆಳಿಗ್ಗೆ 4 ಗಂಟೆಯಿಂದ ಸಂಜೆ 7ರವರೆಗೆ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿದ್ದ. ಮಕ್ಕಳು ಸೇರಿದಂತೆ ಕಾರ್ಮಿಕರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸುತ್ತಿದ್ದ ಎಂದು ಕಾರ್ಮಿಕರು ಒಕ್ಕೂಟದ ಸದಸ್ಯರ ಜೊತೆ ಅಳಲು ತೋಡಿಕೊಂಡಿದ್ದರು.
ಸಂಕಷ್ಟದಲ್ಲಿರುವ ಕಾರ್ಮಿಕರ ಕುರಿತು ಒಕ್ಕೂಟದ ಎಸ್. ಮಂಜೇಶ್ ಕುಮಾರ್ ಅವರು, ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದರು. ನಂತರ, ಕಾರ್ಖಾನೆಗೆ ತೆರಳಿ ಕಾರ್ಮಿಕರನ್ನು ರಕ್ಷಿಸಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಹಾಜರುಪಡಿಸಿದರು. ಬಳಿಕ, ಐಜೂರು ಪೊಲೀಸ್ ಠಾಣೆಗೆ ಮಾಲೀಕನ ವಿರುದ್ಧ ದೂರು ನೀಡಿದರು.
ದೂರಿನ ಮೇರೆಗೆ ಮಾಲೀಕನ ವಿರುದ್ದ ಜೀತ ಪದ್ದತಿ ನಿರ್ಮೂಲನಾ ಕಾಯ್ದೆ, ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ ಹಾಗೂ ಬಿಎನ್ಎಸ್ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.